ಮಂಗಳೂರು: ಮೀನುಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಪುರಾತನ ಕಾಲದ ಶಾಸನಗಳು ಪತ್ತೆ
ಮಂಗಳೂರು, ಮಾ.15: ಹೊಯ್ಗೆ ಬಜಾರ್ನ ಮೀನುಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಶಾಸನಗಳು ಪತ್ತೆಯಾಗಿದ್ದು, ಅವುಗಳು ಪೋರ್ಚುಗೀಸ್ ಹಾಗೂ 11ನೆ ಶತಮಾನದ ಶಾಸನಗಳೆಂದು ಅಂದಾಜಿಸಲಾಗಿದೆ.
ಮೀನುಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಪತ್ತೆಯಾಗಿರುವ ಈ ಶಾಸನಗಳನ್ನು ಮೈಸೂರಿನ ಪುರಾಲೇಖ ವಿಧಿ ವಿಭಾಗದ ಸಹಾಯಕ ಶಾಸನ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿ, ಅದರ ಪಡಿಯಚ್ಚು ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಒಂದು ಶಾಸನದಲ್ಲಿರುವ ಹಳೆಗನ್ನಡ ಮಾದರಿಯ ಸುಮಾರು 11 ಸಾಲಿನ ಲಿಪಿ 11ನೆ ಶತಮಾನದ ಕನ್ನಡವನ್ನು ಹೋಲುತ್ತಿದೆ. ಇನ್ನೊಂದು ಶಾಸನದ ಲಿಪಿ ಪೋರ್ಚುಗೀಸ್ ಭಾಷಾ ಲಿಪಿಯನ್ನು ಹೊಂದಿದ್ದು, ಈ ಶಾಸನಗಳ ಇನ್ನಷ್ಟು ಪರಿಶೀಲನೆ ಹಾಗೂ ಅಧ್ಯಯನ ಅಗತ್ಯವಾಗಿದೆ ಎಂದು ಸಹಾಯಕ ಶಾಸನ ತಜ್ಞರಾದ ಶ್ರೀದೇವಿ ತೇಜಸ್ವಿನಿ ಹಾಗೂ ವೀರ ಮಣಿಕಂಠನ್ ಅಭಿಪ್ರಾಯಿಸಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನಡಿ ಕೌಶಲ್ಯ ಅಭಿವೃದ್ಧಿ ಮತ್ತು ಸುರಕ್ಷಾ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿದೆ. ತರಬೇತಿ ಕೇಂದ್ರದ ಕಟ್ಟಡಕ್ಕಾಗಿ ಕಳೆದ ಸುಮಾರು ಒಂದು ವರ್ಷದ ಹಿಂದೆ ಅಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವಿ ಅಡಿಪಾಯಕ್ಕಾಗಿ ಅಗೆದ ವೇಳೆ ಸುಮಾರು 5 ಅಡಿಯಷ್ಟು ಉದ್ದದ ಈ ಶಾಸನ ಕಲ್ಲುಗಳು ಕಂಡು ಬಂದಿತ್ತು. ಅದನ್ನು ಕಟ್ಟಡ ನಿರ್ಮಾಣದ ವೇಳೆ ಬದಿಯಲ್ಲೇ ಹಾಕಲಾಗಿತ್ತು. ಪ್ರಸ್ತುತ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದು ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಸೆಂತಿಲ್ವೇಲ್ ತಿಳಿಸಿದರು.
ಪ್ರಧಾನ ಮಂತ್ರಿ ಕಚೇರಿಯಿಂದ ಕ್ಷಿಪ್ರ ಸ್ಪಂದನೆ!
ಕಳೆದ ಶನಿವಾರ (ಮಾ. 13ರಂದು) ಮೀನುಗಾರಿಕಾ ವಿಶ್ವವಿದ್ಯಾನಿಲಯ ಕಾಲೇಜಿನ 3ನೆ ವರ್ಷದ ವಿದ್ಯಾರ್ಥಿ ಶ್ರೇಯಸ್ ಕಲ್ಲಿನ ಮೇಲಿನ ಬರಹ ಕಂಡು ಆಸಕ್ತಿಯಿಂದ ಮೊಬೈಲ್ನಲ್ಲಿ ಅದನ್ನು ಕ್ಲಿಕ್ಕಿಸಿದ್ದ. ಬಳಿಕ ಅದನ್ನು ಅಂದು ಮಧ್ಯಾಹ್ನ 1.15ರ ಸುಮಾರಿಗೆ ನನ್ನ ಗಮನಕ್ಕೆ ತಂದಿದ್ದ. ನಾನು ತಕ್ಷಣ ಈ ಬಗ್ಗೆ ಪ್ರಧಾನ ಮಂತ್ರಿಯವರ ಕಚೇರಿಗೆ ಫೋಟೋವನ್ನು ಮೇಲ್ ಮಾಡಿದ್ದೆ. ಸುಮಾರು 10 ನಿಮಿಷಗಳಲ್ಲೇ ಪ್ರತಿಕ್ರಿಯೆ ಬಂದಿದ್ದು, ಸಂಸ್ಕೃತಿ ಇಲಾಖೆಯ ಮುಖ್ಯಸ್ಥೆ ವಿದ್ಯಾವತಿ ಪುರಾತತ್ವ ಇಲಾಖೆಯ ಮೈಸೂರು ವಿಭಾಗದ ಸಹಾಯಕ ಶಾಸನ ತಜ್ಞರಿಗೆ ಈ ಬಗ್ಗೆ ಪರಿಶೀಲನೆ ಹಾಗೂ ಅಧ್ಯಯನಕ್ಕೆ ಸೂಚನೆ ನೀಡಿದ್ದರು. ಅದರಂತೆ ಇಂದು ಬೆಳಗ್ಗೆ ಆಗಮಿಸಿದ ಶಾಸನ ತಜ್ಞರು ಹಾಗೂ ಸಿಬ್ಬಂದಿ ಶಾಸನಗಳ ಪಡಿಯಚ್ಚು ಪಡೆದುಕೊಂಡಿದ್ದಾರೆ.
-ಡಾ. ಸೆಂತಿಲ್ವೇಲ್, ಡೀನ್, ಮೀನುಗಾರಿಕಾ ಮಹಾ ವಿದ್ಯಾಲಯ, ಮಂಗಳೂರು.
‘‘ಹಳೆಗನ್ನಡದಂತಿರುವ ಒಂದು ಶಾಸನ ದಾನ ಶಾಸನವಾಗಿ ಮೇಲ್ನೋಟಕ್ಕೆ ಗೋಚರಿಸಿದೆ. ಆದರೆ ಅದರಲ್ಲಿ ಕೆಲವೊಂದು ಅಕ್ಷರಗಳು ಮಾಸಿ ಹೋಗಿರುವ ಕಾರಣ ಅದರ ನಿಖರತೆ, ಕಾಲಮಾನದ ಕುರಿತಂತೆ ಲಿಪಿಶಾಸ್ತ್ರದ ಮೂಲಕ ಇನ್ನಷ್ಟು ಅಧ್ಯಯನದ ಅಗತ್ಯವಿದೆ. ಅದಕ್ಕಾಗಿ ಪಡಿಯಚ್ಚು ಪಡೆಯಲಾಗಿದ್ದು, ಭಾಷೆ ಹಾಗೂ ಲಿಪಿ ತಜ್ಞರ ಮೂಲಕ ಇದನ್ನು ಇನ್ನಷ್ಟು ಸಂಶೋಧನೆಗಳೊಪಡಿಸಿ ಶಾಸನದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗುವುದು.
-ಶ್ರೀದೇವಿ ತೇಜಸ್ವಿನಿ, ಸಹಾಯಕ ಶಾಸನ ತಜ್ಞರು, ಶಾಸನ ವಿಭಾಗ, ಮೈಸೂರು.
ಶಾಸನಗಳ ಪಡಿಯಚ್ಚು ಪಡೆಯಲಾಗಿದ್ದು, ಅದರ ವರದಿಯನ್ನು ಇಂಡಿಯನ್ ಎಪಿಗ್ರಫಿ ವಾರ್ಷಿಕ ವರದಿಯಲ್ಲಿ ಪ್ರಕಟಿಸಲಾಗುತ್ತದೆ. ಶಾಸನಗಳನ್ನು ಮೀನುಗಾರಿಕಾ ಕಾಲೇಜಿನಿಂದಲೇ ಅಥವಾ ಸ್ಥಳೀಯಾಡಳಿತ ಕೂಡಾ ಮ್ಯೂಸಿಯಂನಲ್ಲಿ ಇಡುವ ಮೂಲಕ ಸಂರಕ್ಷಿಸಬಹುದಾಗಿದೆ. ಈ ಶಾಸನಗಳು ಮತ್ತಷ್ಟು ಹಳೆ ಶಾಸನಗಳ ಹುಡುಕಾಟ ಹಾಗೂ ಅಧ್ಯಯನ, ಶೋಧನೆಗೆ ಅವಕಾಶ ನೀಡುತ್ತದೆ.
-ವೀರ ಮಣಿಕಂಠನ್, ಸಹಾಯಕ ಶಾಸನ ತಜ್ಞರು, ಶಾಸನ ವಿಭಾಗ, ಮೈಸೂರು.