ರಾಷ್ಟ್ರ ಪ್ರೇಮದ ಪುಂಗಿ ಊದುವವರು ಎಲ್ಲಿ: ಕಾಂಗ್ರೆಸ್ ಪ್ರಶ್ನೆ
Update: 2021-03-19 20:27 IST
ಉಡುಪಿ, ಮಾ.19: ಉಡುಪಿ ಅಜ್ಜರಕಾಡಿನಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ್ಯಾಲಿಗೆ ಬರುತ್ತಿರುವ ರಾಜ್ಯದ ಸುಮಾರು 11 ಜಿಲ್ಲೆ ಗಳಿಂದ ಸಾವಿರಾರು ಯುವಕರಿಗೆ ಆಯ್ಕೆ ಸಮಿತಿಯು ಯಾವುದೇ ವಸತಿ ವ್ಯವಸ್ಥೆ ಮಾಡಿದಂತೆ ಕಾಣುತ್ತಿಲ್ಲ. ಬಡ ಕುಟುಂಬಗಳಿಂದ ಬಂದ ಈ ಹುಡುಗರು ಎಲ್ಲೆಲ್ಲೋ ಉಪಹಾರ ಸೇವಿಸಿ ಕೊಂಡು ರಸ್ತೆಯ ಇಕ್ಕೆಲಗಳಲ್ಲಿ, ಒಳರಸ್ತೆಗಳ ಡಾಂಬರು ನೆಲದ ಮೇಲೆ ಹಗಲಿರುಳು ಮಲಗುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಸೊಲ್ಲು ಸೊಲ್ಲಿಗೂ ರಾಷ್ಟ್ರ ಪ್ರೇಮದ ಪುಂಗಿ ಊದುವ ಮಂದಿಯೇ ತುಂಬಿರುವ ಈ ನೆಲದಲ್ಲಿ ದೇಶ ರಕ್ಷಣೆ ಮಾಡುವ ಭಾವೀ ಸೈನಿಕರಿಗೆ ಕೊಡುವ ಮರ್ಯಾದೆ ಇದೇನಾ ? ಬಡ ಮಕ್ಕಳಿಗೆ ಅನ್ನ/ವಸತಿಗಳ ಕನಿಷ್ಠ ಮೂಲಭೂತ ಸೌಕರ್ಯಗಳ ತಾತ್ಕಾಲಿಕ ವ್ಯವಸ್ಥೆಯನ್ನೂ ಮಾಡದೇ ಇರುವಷ್ಟು ಸರಕಾರ ಬಡವಾಗಿದೆಯೆ ಎಂದು ಅಶೋಕ್ ಕುಮಾರ್ ಕೊವೂರು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.