×
Ad

ಕೇರಳದಿಂದ ಬರುವವರಿಗೆ ಕೊರೋನ ನೆಗೆಟಿವ್ ವರದಿ ಕಡ್ಡಾಯ : ದ.ಕ. ಜಿಲ್ಲಾಧಿಕಾರಿ ರಾಜೇಂದ್ರ

Update: 2021-03-25 22:04 IST

ಮಂಗಳೂರು, ಮಾ.25: ದ.ಕ. ಜಿಲ್ಲೆಯಲ್ಲಿ ಕೊರೋನ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತಹ ಕಟ್ಟುನಿಟ್ಟಿನ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಇದರಿಂದ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು. ನಿಯಮಗಳ ಉಲ್ಲಂಘನೆಯಾದಲ್ಲಿ ಕಡ್ಡಾಯವಾಗಿ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲ ಕಲ್ಯಾಣ ಮಂಟಪಗಳ ಮುಖ್ಯಸ್ಥರು, ಸಭೆ, ಸಮಾವೇಶಗಳ ಆಯೋಜಕರು, ಫಾರ್ಮಸಿ ಅಸೋಸಿಯೇಷನ್, ಪೆಟ್ರೋಲ್ ಬಂಕ್ ಮಾಲಕರ ಸಂಘ, ಎಲ್ ಟೋಲ್ ವ್ಯವಸ್ಥಾಪಕರು, ಅಮೆಜಾನ್/ಪ್ಲಿಪ್‌ಕಾರ್ಟ್ ಆನ್‌ಲೈನ್ ವಹಿವಾಟುದಾರರ ಮುಖ್ಯಸ್ಥರು, ಸ್ವಿಗ್ಗಿ ಮತ್ತು ರೆಮ್ಯಾಟೋ ಸೇವಾ ಪೂರೈಕೆದಾರರ ಸಂಘಗಳ ಅಧ್ಯಕ್ಷರೆಲ್ಲರೂ ತಮ್ಮಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರು ಹಾಗೂ ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಬೇಕು. ತಪ್ಪಿದ್ದಲ್ಲಿ ಅಂತಹ ಮಾಲಕರ ವಿರುದ್ಧ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಕೇರಳ ರಾಜ್ಯದಿಂದ ಜಿಲ್ಲೆಗೆ ಹೊಟೇಲ್ ಹಾಗೂ ಅಂಗಡಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಕೆಲಸ ಮಾಡುವಂತಹ ವೃತ್ತಿನಿರತರು ಬಂದು ಹೋಗುತ್ತಾರೆ. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವುದರೊಂದಿಗೆ ನೆಗಿಟಿವ್ ರಿಪೋರ್ಟ್ ತೆಗೆದುಕೊಂಡು ಬರು ವಂತೆ ಆಯಾ ಹೊಟೇಲ್ ಹಾಗೂ ಅಂಗಡಿ ಮಾಲಕರು ನಿಗಾ ವಹಿಸಬೇಕು. ಲಾಡ್ಜ್‌ಗಳಿಗೆ ಆಗಮಿಸುವವರ ವಿವರವನ್ನು ಕಡ್ಡಾಯವಾಗಿ ನೋಂದಣಿ ಪುಸ್ತಕದಲ್ಲಿ ನಮೂದಿಸುವಂತೆ ಸೂಚಿಸಿದರು.

ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹಣವನ್ನು ಗ್ರಾಹಕರಿಂದ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್, ಕೈಗವಸುಗಳನ್ನು ಧರಿಸಿರಬೇಕು. ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಹೊಂದಿರಬೇಕು ಎಂದರು.

ಹವಾ ನಿಯಂತ್ರಿತ ಸ್ಥಳಗಳಲ್ಲಿ ಕೋವಿಡ್ ವೈರಸ್ ಬಹಳ ಬೇಗ ಹರಡುವುದರಿಂದ ಸಭೆ ಸಮಾರಂಭಗಳು, ಕನ್ವೆನ್ಶನ್ ಹಾಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚು ಜನರು ಸೇರಬಾರದು. ಸಮಾರಂಭಗಳನ್ನು ನಡೆಸುವ ಮುನ್ನ ಸಂಬಂಧಪಟ್ಟ ಸೂಕ್ತ ಪ್ರಾಧಿಕಾರದಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ರಾಮಚಂದ್ರ ಬಾಯಾರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಮಹಾನಗರ ಪಾಲಿಕೆ ಆಯುಕ್ತ ದಿನೇಶ್ ಕುಮಾರ್, ಜಿಲ್ಲೆಯ ಕಲ್ಯಾಣ ಮಂಟಪ ಗಳು, ಸಮಾವೇಶ ಕೇಂದ್ರಗಳ ಆಯೋಜಕರು, ಫಾರ್ಮಸಿ ಅಸೋಸಿಯೇಷನ್ ಅಧ್ಯಕ್ಷರು, ಪೆಟ್ರೋಲ್ ಪಂಪ್ ಮಾಲಕರ ಸಂಘ ಹಾಗೂ ಇತರೆ ಸಂಘಗಳ ಅಧ್ಯಕ್ಷರು, ಅಮೆಜಾನ್/ಪ್ಲಿಪ್‌ಕಾರ್ಟ್ ಆನ್‌ಲೈನ್ ವಹಿವಾಟುದಾರರ ಮುಖ್ಯಸ್ಥರು, ಸ್ವಿಗ್ಗಿ ಮತ್ತು ರೆಮ್ಯಾಟೋ ಸೇವಾ ಪೂರೈಕೆದಾರರ ವ್ಯವಸ್ಥಾಪಕರು ಉಪಸ್ಥಿತರಿದ್ದರು.

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಡ್ಡಾಯ

ರೋಗದ ನಿಯಂತ್ರಣಕ್ಕಾಗಿ ಸರಕಾರವು ನೀಡಿರುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರ ಜೊತೆಗೆ ಕೋವಿಡ್ ಲಸಿಕೆ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಭಯ, ತಪ್ಪು ಕಲ್ಪನೆಯನ್ನು ಬಿಟ್ಟು, 45 ವರ್ಷಕ್ಕಿಂತ ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್-19 ನಿರೋಧಕ ಲಸಿಕೆಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News