ಹಣ ಎಗರಿಸಲು ಹವಾಲಾ ಏಜೆಂಟರಿಂದ ದರೋಡೆ ನಾಟಕ: ಕಮಿಷನರ್ ಶಶಿಕುಮಾರ್
ಮಂಗಳೂರು, ಮಾ.27: ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿ ಸ್ಕೂಟರನ್ನು ತಡೆದು ವ್ಯಕ್ತಿಯಿಂದ 16.20 ಲಕ್ಷ ರೂ. ದೋಚಿದ್ದ ದರೋಡೆ ಪ್ರಕರಣ ಹೊಸ ತಿರುವು ಪಡೆದಿದ್ದು, ಸಂತ್ರಸ್ತನೇ ಆರೋಪಿಯಾಗಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದಾತನೇ ಪ್ರಕರಣದಲ್ಲಿ ಆರೋಪಿಯಾಗಿರುವುದು ಮಾತ್ರವಲ್ಲದೆ, ದರೋಡೆ ಅತ್ಯಂತ ವ್ಯವಸ್ಥಿತವಾದ ನಾಟಕವಾಗಿದೆ. ಈ ಪ್ರಕರಣದ ಮೂಲಕ ಕೋಟ್ಯಂತರ ರೂ. ವ್ಯವಹಾರದ ಹವಾಲಾ ಜಾಲವೊಂದನ್ನು ಕೂಡಾ ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಮುಹಮ್ಮದ್ ರಿಫಾತ್ ಅಲಿ ರಾಶಿತ್, ಅಶ್ಫಕ್ ಯಾನೆ ಜುಟ್ಟು, ಜಾಫರ್ ಸಾದಿಕ್, ಮುಹಮ್ಮದ್ ಇಸ್ಮಾಯಿಲ್ ಮತ್ತು ಕೆ.ಎಚ್. ಮಯ್ಯದ್ದಿ ಎಂಬವರನ್ನು ದಸ್ತಗಿರಿ ಮಾಡಲಾಗಿದೆ. ಇದೇ ವೇಳೆ 95,000 ರೂ. ನಗದು, ಬೈಕ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಫೆ. 22ರಂದು ಘಟನೆ ನಡೆದಿದೆ. ಅಕ್ಕನ ಮಗಳ ಮದುವೆ ಹಾಗೂ ಬಟ್ಟೆ ಬರೆ ಖರೀದಿಸಲೆಂದು ನಗದಿನೊಂದಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ಸಂದರ್ಭ ಮೂರು ಮಂದಿ ದಾರಿಯಲ್ಲಿ ಅಡ್ಡಗಟ್ಟಿ ಗಮನ ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾಗಿದ್ದಾಗಿ ಸೂರಲ್ಪಾಡಿಯ ಅಬ್ದುಲ್ ಸಲಾಂ ಎಂಬಾತ ಮಾ. 4ರಂದು ದೂರು ನೀಡಿದ್ದರು. ಅದರಂತೆ ತನಿಖೆ ಆರಂಭಗೊಂಡು ಸಿಸಿಟಿವಿ ಪರಿಶೀಲಿಸಿದಾಗ ನಾಲ್ಕೈದು ಮಂದಿಯ ತಂಡ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂತು ಎಂದು ಅವರು ತಿಳಿಸಿದರು.
ಹವಾಲಾದಡಿ ಕೋಟ್ಯಾಂತರ ರೂ. ವರ್ಗಾವಣೆಯ ಶಂಕೆ
ಆರೋಪಿಗಳನ್ನು ಪತ್ತೆ ಹಚ್ಚಿ, ಹಣದ ಮೂಲ ಹುಡುಕಲು ಹೊರಟಾಗ ಹವಾಲಾ ವರ್ಗಾವಣೆಗಾಗಿ ವ್ಯಕ್ತಿಯೊಬ್ಬರಿಂದ ಈತ ಹಣ ಪಡೆದು ಬಂದಿದ್ದ. ದೂರುದಾತ ಸೇರಿದಂತೆ ಇತರ ಐದಾರು ಮಂದಿ ಹವಾಲಾ ವರ್ಗಾವಣೆ ಏಜೆಂಟರಾಗಿ ಕೆಲಸ ಮಾಡುತ್ತಿರುವುದು ತಿಳಿದು ಬಂತು. ಈ ಏಜೆಂಟರು ಮಾಸಿಕ ತಲಾ 8000 ರೂ. ವೇತನ ಹಾಗೂ ಹಣ ವರ್ಗಾವಣೆ ಸಂದರ್ಭ ಕಮಿಷನರ್ ರೂಪದ ಹಣ ಸೇರಿ ಒಟ್ಟು ತಿಂಗಳಿಗೆ ಸುಮಾರು 15000 ದಷ್ಟು ಹಣ ಸಂಪಾದಿಸುತ್ತಿದ್ದರು.
ಆರೋಪಿ ಇಸ್ಮಾಯಿಲ್ ಎಂಬಾತ ಈ ದರೋಡೆಯ ನಾಟಕದ ಪ್ರಮುಖ ಸೂತ್ರಧಾರ. ಆತನ ಯೋಜನೆಯಂತೆ ದೂರುದಾತ, ಸಂತ್ರಸ್ತ ಹಾಗೂ ಇತರ ನಾಲ್ವರನ್ನು ಸೇರಿಸಿಕೊಂಡು ದರೋಡೆ ನಾಟಕ ಮಾಡಲಾಗಿದೆ . ಹವಾಲಾ ವ್ಯವಹಾರದ ಮೂಲಕ ಕೋಟ್ಯಂತರ ರೂ. ವರ್ಗಾವಣೆಯಾಗಿರುವುದು ಸದ್ಯದ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಕಮಿಷನರ್ ವಿವರಿಸಿದರು.
ಗೋಷ್ಠಿಯಲ್ಲಿ ಡಿಸಿಪಿಗಳಾದ ವಿನಯ್ ಗಾಂವ್ಕರ್, ಹರಿರಾಂ ಉಪಸ್ಥಿತರಿದ್ದರು.
ದೂರುದಾರ ಮನೆಯವರೊಂದಿಗೆ ಪರಾರಿ!
ಆರಂಭದಲ್ಲಿ ಪೊಲೀಸರನ್ನು ದಾರಿ ತಪ್ಪಿಸುವ ಪ್ರಯತ್ನ ದೂರುದಾತ ಆರೋಪಿ ಹಾಗೂ ಇತರ ಬಂಧಿತ ಆರೋಪಿಗಳಿಂದ ನಡೆದಿದೆ. ತಾನೇ ಖುದ್ದು ಈ ಪ್ರಕರಣದ ಆಳಕ್ಕಿಳಿದಾಗ ಹವಾಲಾ ಜಾಲ ಬೆಳಕಿಗೆ ಬಂದಿದೆ. ಹವಾಲಾ ಹಣ ವರ್ಗಾವಣೆಗೆ ಇವರು ಮೊಬೈಲ್ ಬಳಕೆ ಮಾಡುವುದಿಲ್ಲ. ಇದೊಂದು ವ್ಯವಸ್ಥಿತವಾಗಿ ನಡೆದ ಪ್ರಕರಣವಾಗಿದ್ದ ಕಾರಣ ಹಲವು ದಿನಗಳ ಕಾಲ ದೂರನ್ನೂ ದಾಖಲಿಸಲಾಗಿಲ್ಲ. ಹಣ ಪಡೆಯಬೇಕಿದ್ದವರು ಹಾಗೂ ಹಣ ನೀಡಿದವರಿಂದ ಒತ್ತಡ ಬಂದಾಗ ದೂರು ನೀಡಲಾಗಿದೆ. ದೂರು ನೀಡಿದಾತ ಪೂರ್ಣ ಪ್ರಮಾಣದ ಹವಾಲಾ ಏಜೆಂಟ್ ಆಗಿದ್ದು, ಇದೀಗ ಮನೆಯವರೊಂದಿಗೆ ಪರಾರಿಯಾಗಿದ್ದಾನೆ. ಹುಡುಕುವ ಪ್ರಯತ್ನ ನಡೆದಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳಿದ್ದು, ಅವರಲ್ಲಿ ಇಬ್ಬರು ದುಬೈಗೆ ಹೋಗಿರುವುದೂ ಬೆಳಕಿಗೆ ಬಂದಿದೆ. ಮಂಗಳೂರಿನಿಂದಲೇ ಕಾರ್ಯಾಚರಿಸುತ್ತಿರುವ ಹವಾಲಾ ಪ್ರಕರಣದ ಪ್ರಮುಖ ವ್ಯಕ್ತಿ ಹಾಗೂ ಹವಾಲಾ ಜಾಲ ಬೇಧಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಸಂಬಂಧಿಸಿದ ಇಲಾಖೆಯ ಸಹಾಯ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.