ಕಟಾವು ಯಂತ್ರಗಳ ಬಾಡಿಗೆ ದರ ಹೆಚ್ಚಳ: ಏಕಾಏಕಿ ದರ ಏರಿಕೆಗೆ ಆಕ್ರೋಶ
ಉಡುಪಿ, ಮಾ.26: ಒಂದೆಡೆ ಕೂಲಿ ಕಾರ್ಮಿಕರ ಕೊರತೆ ಇನ್ನೊಂದೆಡೆ ಕಾಡುಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಇದೀಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬಿಸಿ ಕೂಡ ತಟ್ಟುತ್ತಿದೆ. ಹಿಂಗಾರು ಇಳುವರಿ ಕಟಾವಿಗಾಗಿ ಯಂತ್ರಗಳಿಗೆ ಹೆಚ್ಚಿನ ಬಾಡಿಗೆ ನೀಡುವ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯಲ್ಲಿ ಈಗ ಹಿಂಗಾರು ಕೃಷಿಯ ಫಸಲು ಕಟಾವಿನ ಸಮಯ. ನಮ್ಮಲ್ಲಿ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಹೆಚ್ಚಿನ ರೈತರು ಕಟಾವಿಗೆ ಯಂತ್ರದ ಮೊರೆ ಹೋಗುತ್ತಿದ್ದಾರೆ. ಕರಾವಳಿಯಲ್ಲಿ ಕೃಷಿ ಲಾಭದಾಯಕ ಅಲ್ಲ ಎಂಬ ಭಾವನೆ ಇರುವ ಮಧ್ಯೆ ತೈಲ ಬೆಲೆ ಏರಿಕೆಯ ಪರಿಣಾಮ ಕಟಾವು ಯಂತ್ರ ಗಳು ತಮ್ಮ ಬಾಡಿಗೆ ದರವನ್ನು ಹೆಚ್ಚಿಸಿಕೊಂಡಿರುವುದು ರೈತರಿಗೆ ಬಹಳ ದೊಡ್ಡ ಹೊರೆಯಾಗುತ್ತಿದೆ.
ಕಳೆದ ಹಿಂಗಾರು ಹಾಗೂ ಮುಂಗಾರಿನಲ್ಲಿ ಗಂಟೆಯೊಂದಕ್ಕೆ 2200ರೂ. ಬಾಡಿಗೆ ದರದಲ್ಲಿ ಕಟಾವು ಮಾಡಲಾಗುತ್ತಿತ್ತು. ಇದೀಗ ಆ ಯಂತ್ರದ ಬಾಡಿಗೆ 2500 ರೂ.ಗೆ ಏರಿಕೆಯಾಗಿದೆ. ಇದರಿಂದ ಎರಡು ಮೂರು ಗಂಟೆಗಳ ಅವಧಿಗೆ ಯಂತ್ರಗಳನ್ನು ಬಾಡಿಗೆ ಪಡೆದುಕೊಂಡರೆ ರೈತರು ದುಬಾರಿ ಹಣವನ್ನು ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೃಷಿಕರು ಸಾವಿರಾರು ರೂ. ನಷ್ಟ ಅನುಭವಿಸುಂತಾಗುತ್ತಿದೆ.
ಖಾಸಗಿ ಯಂತ್ರಗಳ ಕಾರುಬಾರು: ಕೃಷಿ ಇಲಾಖೆಗಿಂತ ಖಾಸಗಿ ಯಂತ್ರ ಗಳ ಕಾರುಬಾರೇ ನಮ್ಮಲ್ಲಿ ಜೋರಾಗಿ ಕಂಡುಬರುತ್ತಿದೆ. ಇದರಿಂದ ಜಿಲ್ಲೆಯ ರೈತರು ಅಂತರ್ ಜಿಲ್ಲೆಗಳ ಕಟಾವು ಯಂತ್ರಗಳನ್ನೇ ಅವಲಂಬಿಸಬೇಕಾಗಿದೆ.
ಕೃಷಿ ಇಲಾಖೆ ಅಧೀನದಲ್ಲಿ ಬೆರಳೆಣಿಕೆಯಷ್ಟೇ ಯಂತ್ರಗಳಿದ್ದು, ಹೊರ ಜಿಲ್ಲೆ, ರಾಜ್ಯದ ಯಂತ್ರಗಳನ್ನು ಅವಲಂಬಿಸುವುದು ಇಲ್ಲಿನ ರೈತರಿಗೆ ಅನಿವಾರ್ಯವಾಗಿದೆ. ಕೊರೊನಾ ಬಳಿಕ ಕೂಲಿ ಕಾರ್ಮಿಕರ ಕೊರತೆ ವಿಪರೀತ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದುದರಿಂದ ರೈತರು ಯಂತ್ರದ ಮಾಲಕರು ಕೇಳಿದಷ್ಟು ಬಾಡಿಗೆ ನೀಡುವ ಸ್ಥಿತಿ ತಲೆದೋರಿದೆ.
ಕಳೆದ ಕೆಲ ವರ್ಷಗಳಿಂದ ಯಂತ್ರದ ಬಾಡಿಗೆ ದರ ಏಕಾಏಕಿ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಯಂತ್ರಗಳ ಕೊರತೆಯ ನೆಪವನ್ನಾಗಿಸಿಕೊಂಡು ಯಂತ್ರಗಳಿಗೆ ಮಾಲಕರು ಬೇಡಿಕೆಯೊಡ್ಡುತ್ತಿದ್ದಾರೆ. ಹೀಗೆ ಏಕಾಏಕಿ ದರ ಹೆಚ್ಚಿಸಿ ರೈತರನ್ನು ಶೋಷಣೆ ಮಾಡುವುದನ್ನು ತಡೆಯಲು ಸರಕಾರವೇ ಬಾಡಿಗೆ ದರ ನಿಗದಿಪಡಿಸ ಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.
ಹಿಂಗಾರುವಿನಲ್ಲಿ ಸುಮಾರು ಹೆಕ್ಟೇರ್ನಲ್ಲಿ ಭತ್ತದ ಕೃಷಿ ಆಗಿದ್ದು, ನಾಟಿ ಮಾಡಿದ 90, 110 ದಿನದೊಳಗೆ ಕಟಾವಿಗೆ ಬರುತ್ತದೆ. ಬೆಳೆದ ಭತ್ತದ ಸಲನ್ನು ಗದ್ದೆಯಲ್ಲಿ ಬಿಟ್ಟು ವಾರಗಟ್ಟಲೇ ಕಾಯುವಂತಿಲ್ಲ. ಅಲ್ಲದೇ ನೀರಿನ ಸಮಸ್ಯೆಯಿಂದಾಗಿ ಬೆರಳಣಿಕೆಯಷ್ಟೇ ರೈತರು ಕೃಷಿ ಮಾಡುತ್ತಾರೆ. ಸಣ್ಣಪುಟ್ಟ ಕೃಷಿ ಭೂಮಿಗೆ ಯಂತ್ರ ತಂದು ಕಟಾವು ಮಾಡುವುದು ಕಷ್ಟ. ಈ ತೈಲ ಬೆಲೆ ಏರಿಕೆಯಿಂದ ಯಂತ್ರಗಳ ಬಾಡಿಗೆ ಬರಿಸುವುದು ಕಷ್ಟಸಾಧ್ಯವಾಗುತ್ತಿದೆ.
-ಕರುಣಾಕರ ಶೆಟ್ಟಿ, ಹಿರಿಯ ರೈತಹಿಂಗಾರು ಬೆಳೆಯಲ್ಲಿ ನಿರೀಕ್ಷಿತ ಸಲು ಸಿಗುವುದು ಕಡಿಮೆ. ಆದರೂ ಭೂಮಿ ಹಡಿಲು ಬೀಳಬಾರದೆಂಬ ಉದ್ದೇಶಕ್ಕೆ ಕೃಷಿ ಮಾಡುತ್ತಿದ್ದೇವೆ. ಹಿಂಗಾರು ಕೃಷಿಗೆ ಖರ್ಚು, ರೋಗ ಭಾದೆಯೂ ಜಾಸ್ತಿ ಇರುತ್ತದೆ. ಈ ಹಿಂಗಾರು ಕಟಾವಿನ ಸಮಯದಲ್ಲೇ ತೈಲ ಬೆಲೆ ಹೆಚ್ಚಳವಾಗಿದೆ. ಇದರ ಹೊಡೆತ ರೈತರಿಗೂ ತಟ್ಟಿದೆ. ಕಟಾವು ಯಂತ್ರ ಮಾಲೀಕರು ಪ್ರತಿ ಗಂಟೆಗೆ 300 ರೂ.ನಂತೆ ಬಾಡಿಗೆ ಹೆಚ್ಚಿಸಿದ್ದಾೆ. ಇದು ಬಹಳ ದೊಡ್ಡ ಹೊರೆಯಾಗಿದೆ.
-ನಾರಾಯಣ ಶೆಟ್ಟಿ, ಕೃಷಿಕ