'ಮಂಗಳೂರು ಲಿಟ್ ಫೆಸ್ಟ್' ಉದ್ಘಾಟನೆ
ಮಂಗಳೂರು, ಮಾ.27: ‘ಭಾರತೀಯ ಆಲೋಚನೆಗಳ ಮರು ರೂಪಿಸುವಿಕೆ’ ಎಂಬ ವಿಷಯದಲ್ಲಿ ಆಯೋಜಿಸಿರುವ ಒಂದು ದಿನದ ‘ಮಂಗಳೂರು ಲಿಟ್ ಫೆಸ್ಟ್’ ನಗರದ ಕೊಡಿಯಾಲ್ಬೈಲ್ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಮಣಿಪಾಲ ಮಾಹೆ ವಿದ್ಯಾಸಂಸ್ಥೆಯ ಡಾ ನಂದಕಿಶೋರ್ ಎಂ.ಎಸ್. ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶಕ್ತಿ ಸಿನ್ಹಾ ದೀಪ ಬೆಳಗಿಸಿ ಉದ್ಘಾಟಿಸಿದರು.
ಮೈಥಿಕ್ ಸೊಸೈಟಿ ಸದಸ್ಯ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶರಣ್ಯಾ ಮತ್ತು ಸುಮೇಧ ಪ್ರಾರ್ಥಿಸಿದರು. ಸುನೀಲ್ ಕುಲಕರ್ಣಿ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ, ಮಾಳವಿಕಾ ಕಾರ್ಯಕ್ರಮ ನಿರೂಪಿಸಿದರು.
ಗೋಷ್ಠಿ:
ಮೊದಲ ಗೋಷ್ಠಿಯಲ್ಲಿ ‘Post Pandemic Narrative: Reimagining the India Way’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದ ಶಕ್ತಿ ಸಿನ್ಹಾ, ಕೊರೋನ ಬಳಿಕ ಭಾರತ ತನ್ನದೇ ಆದ ರೀತಿಯಲ್ಲಿ ಈ ಸಂಕಷ್ಟದ ಸ್ಥಿತಿಯನ್ನು ನಿಯಂತ್ರಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿಶ್ವಗುರುವಾಗುವತ್ತ ಭಾರತದ ಈ ನಿಲುವುಗಳು ಸಹ ಪ್ರಾಮುಖ್ಯತೆ ಪಡೆದಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಸಾಧನೆ ಮೆರೆದಿದೆ. ಕೊರೋನಗೆ ಲಸಿಕೆ ಹುಡುಕಿ ಅದನ್ನು ದೇಶ, ವಿದೇಶಗಳಿಗೆ ತಲುಪಿಸುವ ಕಾರ್ಯ ಮಾಡಿದೆ ಎಂದು ಹೇಳಿದರು.
ನಾವು ಈ ಸಂಕಷ್ಟದ ಸಂದರ್ಭದಲ್ಲೂ ಅಭಿವೃದ್ಧಿಯತ್ತ ಹೆಜ್ಜೆ ಇರಿಸಿದ್ದೇವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಆತ್ಮನಿರ್ಭರದ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಧಿಸಿದೆ. ಆ ಮೂಲಕ ನಾಯಕನ ಸ್ಥಾನವನ್ನು ಪಡೆದಿದೆ ಎಂದು ಅವರು ಹೇಳಿದರು.
ವಿಕ್ರಂ ಸೂದ್ ಮಾತನಾಡಿ, ಕೊರೋನ ಬಳಿಕ ಭಾರತ ಚೇತರಿಸಿಕೊಳ್ಳಲು ಆಯ್ಕೆ ಮಾಡಿದ ದಾರಿಯೇ ಅದ್ಭುತ. ಭಾರತ ಪಡೆದುಕೊಳ್ಳುವ ಸಂಸ್ಕೃತಿಯಿಂದ ನೀಡುವ ಸಂಸ್ಕೃತಿಗೆ ಬೆಳೆದಿದೆ. ಭಾರತ ಚೀನಾ ವಿರುದ್ಧ ತನ್ನ ಸಾಮರ್ಥ್ಯ ಪ್ರದರ್ಶನ ಮಾಡಿದೆ. ಭಾರತದ ರಾಷ್ಟ್ರೀಯ ಆಸ್ಥೆಗಳು ದೇಶವನ್ನು ಸಮೃದ್ಧವಾಗಿಸಿವೆ. ನಮ್ಮ ಸಂಸ್ಕೃತಿ ಇತಿಹಾಸವನ್ನು ಮರೆಯದೆ ಮುಂದುವರಿಯಬೇಕು ಎಂದು ಹೇಳಿದರು.
ಮಾಧವ್ ದಾಸ್ ನಲಪಾಟ್ ಮಾತನಾಡಿ, ನಮ್ಮ ದೇಶಕ್ಕೆ ಅದರದ್ದೇ ಆದ ಇತಿಹಾಸವಿದೆ. ನಾವು ನಮ್ಮಲ್ಲಿನ ಶಕ್ತಿಯನ್ನು ತಿಳಿದುಕೊಳ್ಳುವಲ್ಲಿ ಸಾಧ್ಯವಾಗಿದೆ. ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳಲು, ಅರ್ಥ ಮಾಡಿಕೊಳ್ಳಲು ಸಹಾಯವಾಗಿದೆ. ನಾಗರಿಕತೆಯ ಬಗ್ಗೆ ನಮ್ಮಲ್ಲಿ ಅರಿವು ಮೂಡಿದೆ. ಆ ಮೂಲಕ ಜಗತ್ತಿಗೆ ನಾವು ಯಾವ ರೀತಿಯಲ್ಲಿ ಗುರುತಿಸಿಕೊಳ್ಳಬೇಕು ಎಂಬುದರ ಬಗ್ಗೆ ಭಾರತ ತಿಳಿದುಕೊಂಡಿದೆ. ವಿಶ್ವಕ್ಕೆ ಸಮಸ್ಯೆಗಳನ್ನು ಹೇಳುವ ಬದಲು, ವಿಶ್ವದ ಸಮಸ್ಯೆಗೆ ಪರಿಹಾರ ನೀಡುವಂತಾಗಬೇಕು ಎಂಬ ಗುರಿಯ ಜೊತೆಗೆ ಭಾರತ ಇಂದು ಹೆಜ್ಜೆ ನೆಟ್ಟಿದೆ. ಭಾರತ ವಸುದೈವ ಕುಟುಂಬಕಂ ಎಂಬ ಧ್ಯೇಯದ ಜೊತೆಗೆ ವಿಶ್ವಮಾನ್ಯವಾಗುತ್ತಿದೆ. ಕೊರೋನಾ ಅವಧಿಯನ್ನು ಭಾರತ ಅವಕಾಶವಾಗಿ ಬಳಸಿಕೊಂಡಿದೆ ಎಂದು ಹೇಳಿದರು.
ಡಾ ದತ್ತೇಶ್ ಡಿ ಪ್ರಭು ಪರುಲೆಖಾ ವರ್ತಮಾನದ ವಿಷಯಗಳ ಬಗ್ಗೆ ಮಾತನಾಡಿ, ಕೊರೋನ ನಂತರದಲ್ಲಿ ಭಾರತದ ವಿದೇಶೀ ನೀತಿಯಲ್ಲಿ ಬದಲಾವಣೆಯಾಗಿದೆ. ಭಾರತದ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಈ ಸಂಕಷ್ಟದ ಸಮಯ ಸಹಾಯ ಮಾಡಿದೆ. ನಾಲ್ಕೂ ದಿಕ್ಕುಗಳಲ್ಲಿ ಭಾರತದ ಸ್ಥಾನ ಉನ್ನತ ಸ್ಥರಕ್ಕೇರಿದೆ. ಭಾರತ ರಾಜಕೀಯವಾಗಿ ವಿಶ್ವದೆದುರು ತನ್ನನ್ನು ಪ್ರದರ್ಶಿಸದೆ, ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಕೆಲಸಗಳನ್ನು ನಿರ್ವಹಿಸಿದೆ. ಕೊರೋನ ಸಂಕಷ್ಟ ನಿವಾರಣೆಯ ನಾಯಕತ್ವವನ್ನು ಭಾರತ ವಹಿಸಿದೆ ಎಂದೆನ್ನಬಹುದು ಎಂದರು.
ಕೊರೋನ ಬಳಿಕ ದೇಶ ಸಮೃದ್ಧವಾಗಿದೆ. ತನ್ನ ಜೊತೆಗೆ ಜಗತ್ತಿನ ಸುರಕ್ಷತೆಗೂ ಭಾರತ ಪ್ರಾಮುಖ್ಯತೆ ನೀಡಿದೆ. ಆ ಮೂಲಕ ಭಾರತ ವಿಶ್ವದಲ್ಲಿಯೇ ಮಹತ್ವದ ಸ್ಥಾನವನ್ನು ಪಡೆದಿದೆ ಎಂದು ಡಾ. ನಂದಕಿಶೋರ್ ಹೇಳಿದರು.