ಹೂಡೆ ಕೆನರಾ ಸ್ಟ್ರೈಕರ್ಸ್ ತಂಡಕ್ಕೆ ಎಚ್ಪಿಎಲ್ ಕ್ರಿಕೆಟ್ ಟ್ರೋಫಿ
ಉಡುಪಿ, ಮಾ.27: ಹೂಡೆಯ ಕರಾವಳಿ ಕ್ರಿಕೆಟರ್ಸ್ ಆಶ್ರಯದಲ್ಲಿ ಇತ್ತೀಚೆಗೆ ಹೂಡೆಯಲ್ಲಿ ನಡೆದ ಎಚ್ಪಿಎಲ್ ಟ್ರೋಫಿ -2021 ಕ್ರಿಕೆಟ್ ಪಂದ್ಯಾಟದಲ್ಲಿ ಝಾಕೀರ್ ಹೂಡೆ ನೇತೃತ್ವದ ಕೆನರಾ ಸ್ಟ್ರೈಕರ್ಸ್ ತಂಡವು ಟ್ರೋಫಿಯನ್ನು ಗೆದ್ದು ಕೊಂಡಿದೆ. ರನ್ನರ್ಸ್ ಅಪ್ ಪ್ರಶಸ್ತಿಯನ್ನು ಯೋಗೀಶ್ ಹೂಡೆ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡವು ಪಡೆದುಕೊಂಡಿತು.
ಹೂಡೆ ಪರಿಸರದ ಆಹ್ವಾನಿತ ಆರು ತಂಡಗಳು ಈ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಫೈನಲ್ ಪಂದ್ಯಾಟದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಚಿನ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಅಲ್ಫಾಝ್ ಹೂಡೆ, ಉತ್ತಮ ಬ್ಯಾಟ್ಸ್ಮ್ಯಾನ್ ಪ್ರಶಸ್ತಿಯನ್ನು ವಿನೋದ್ ಪೇರ್ಲಕದಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರಿಫಾಝ್ ಪಡೆದುಕೊಂಡರು.
ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಟಿ.ಎಂ.ರಹ್ಮತುಲ್ಲಾ, ಮಾಧವ ಬಂಗೇರ, ನಿಶಾಂತ್ ಶೆಟ್ಟಿ, ಪ್ರಭಾಕರ್ ಸನಿಲ್, ಕರಾವಳಿ ಹೂಡೆಯ ಮಾಜಿ ಆಟಗಾರ ಕೆ.ಬಿಲಾಲ್, ನವೀನ್ ಕದಿಕೆ, ಜುನೈದ್ ಕುದುರ್, ರವಿ ಕುಂದರ್, ದಾಮೋದರ ಬಂಗೇರ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು. ಪಂದ್ಯಾಟದ ಸಂಯೋಜಕ ಚೇತನ್ ಸುವರ್ಣ, ಸರ್ಫರಾಝ್, ರಿಫಾಝ್, ರೋಶನ್ ಮೆಂಡನ್ ಉಪಸ್ಥಿತರಿದ್ದರು.
ವೀಕ್ಷಣೆ ವಿವರಣೆಯನ್ನು ರಹ್ಮತ್ ಪೇರ್ಲಕಡಿ ನಡೆಸಿಕೊಟ್ಟರು.