ಕಲಾವಿದರ ಬದುಕಿಗೆ ಅಭಿಮಾನಿಗಳ ಶ್ರೀರಕ್ಷೆ: ಪುರುಷೊತ್ತಮ ಪೂಂಜ
Update: 2021-03-27 21:21 IST
ಮಂಗಳೂರು, ಮಾ.27: ಬಾಯಿ ಮಾತಿನ ಅಭಿಮಾನದಿಂದಲೇ ಸಂತೃಪ್ತಿ ಪಡೆಯುವುದು ಕಲಾವಿದರ ಸ್ವಭಾವ. ಆದರೆ ಅಂತಹ ಅಭಿಮಾನ ದೃಢವಾಗುವುದು ಕಲಾವಿದರು ಸಂಕಷ್ಟದಲ್ಲಿದ್ದಾಗ ಮಾತ್ರ. ಅಭಿಮಾನಿಗಳ ಹಣಕಾಸಿನ ನೆರವು ಶ್ರೀರಕ್ಷೆಯಾಗಿ ಬದುಕಿನ ಬಗ್ಗೆ ಭರವಸೆ ಮೂಡಿಸಿದೆ ಎಂದು ಯಕ್ಷಗಾನದ ಹಿರಿಯ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೊತ್ತಮ ಪೂಂಜ ಹೇಳಿದ್ದಾರೆ.
ರಕ್ತ ಸಂಬಂಧಿ ಗಂಭೀರ ಕಾಯಿಲೆಗೆ ಒಳಗಾಗಿ ನಗರದ ಕದ್ರಿ ಕಂಬಳದ ತಾತ್ಕಾಲಿಕ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಔಷಧೋಪಚಾರಕ್ಕಾಗಿ ಮುಂಬೈ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ನೇತೃತ್ವದಲ್ಲಿ ನೀಡಲಾದ ಆರ್ಥಿಕ ನೆರವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಈಗಾಗಲೇ ಮೊದಲ ಹಂತದಲ್ಲಿ 1 ಲಕ್ಷ ರೂ. ಮೊತ್ತವನ್ನು ಚಿಕಿತ್ಸೆಗಾಗಿ ನೀಡಿದ್ದ ಕಲಾಭಿಮಾನಿ ಬಳಗ, ಎರಡನೇ ಸುತ್ತಿನಲ್ಲಿ ಮುಂಬೈ ಹಾಗೂ ಊರಿನ ದಾನಿಗಳಿಂದ ಸಂಗ್ರಹಿಸಿದ 75 ಸಾವಿರ ರೂ. ನಿಧಿಯನ್ನು ಅವರಿಗೆ ಹಸ್ತಾಂತರಿಸಿತು.