ಕಿದಿಯೂರು ದೇವಸ್ಥಾನದ ಅರ್ಚಕರಿಂದ ಅನ್ಯಾಯ ಆರೋಪ: ಗ್ರಾಮಸ್ಥರ ಆಕ್ರೋಶ
ಮಲ್ಪೆ, ಮಾ.28: ಕಿದಿಯೂರು ಶ್ರೀವಿಷ್ಣು ಮೂರ್ತಿ ಮತ್ತು ವನದುರ್ಗಾ ದೇವಸ್ಥಾನದ ಪ್ರಸ್ತುತ ಅರ್ಚಕರಿಂದ ಆಗುವ ಅನ್ಯಾಯದ ವಿರುದ್ಧ ರವಿವಾರ ನಡೆದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಅರ್ಚಕ ವರ್ಗದ ಕೆಲವೊಂದು ಅನಗತ್ಯ ನಿಯಮಾವಳಿಯಿಂದ ದೇವಳಕ್ಕೆ ಬರುವ ಭಕ್ತಾಧಿಗಳಿಗೆ ಸಮಸ್ಯೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ದೇಗುಲಕ್ಕೆ ಆಡಳಿತಾಧಿಕಾರಿ ನೇಮಕ ಮತ್ತು ಊರಿನ ನಾಗರಿಕರ ವ್ಯವಸ್ಥಾನಪನಾ ಸಮಿತಿಯನ್ನು ರಚಿಸಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ದೇವಸ್ಥಾನದ ಮಹಾದ್ವಾರದ ಬಾಗಿಲು ಮುಚ್ಚಿ ಸಾರ್ವಜನಿಕ ವಾಹನ ಪ್ರವೇಶಕ್ಕೆ ತಡೆಯೊಡ್ಡಿರುವುದನ್ನು ಕೂಡಲೇ ತೆರವುಗೊಳಿಸಬೇಕು. ಸೇವೆ ನೀಡಿದ ಭಕ್ತಾಧಿಗಳಿಗೆ ಸಂಕಲ್ಪ ಸಹಿತ ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿ ಸೇವಾರ್ಥಿಗಳನ್ನು ದೂರ ನಿಲ್ಲಿಸಿ ಇತರೆ ಬ್ರಾಹ್ಮಣ ವರ್ಗ ದವರನ್ನು ಸಂಕಲ್ಪಕ್ಕೆ ಕೂರಿಸಲಾಗುತ್ತದೆ. ಇದು ಸರಿಯಾದ ಕ್ರಮ ಅಲ್ಲ. ಸೇವೆ ನೀಡಿದ ಸೇವಾರ್ಥಿಗಳಿಗೆ ಸಂಕಲ್ಪಕ್ಕೆ ಕೂರುವಂತಾಗಬೇಕು. ಪರ್ಯಾಯ ಅರ್ಚಕರು ಭಕ್ತಾಧಿಗಳು ಸುತ್ತು ಬಾರದಂತೆ ಆಳವಡಿಸಲಾಗಿರುವ ಕಬ್ಬಿಣದ ಸರಪಳಿಯನ್ನು ಕೂಡಲೇ ತೆರವುಗೊಳಿಸಿ, ಪೂಜೆಯಲ್ಲಿ ಭಾಗಿಯಾಗಲು ಅವಕಾಶ ನೀಡಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಸಭೆಯಲ್ಲಿ ಉದ್ಯಮಿ ಭುವನೇಂದ್ರ ಕಿದಿಯೂರು, ರಾಮಚಂದ್ರ ಕಿದಿ ಯೂರು, ಕೆ.ಉದಯ ಕುಮಾರ್ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಗುಂಡು ಬಿ. ಅಮೀನ್, ಹಿರಿಯಣ್ಣ ಟಿ.ಕಿದಿಯೂರು, ಸಂಜೀವ ಗುರಿಕಾರ, ಭಾಸ್ಕರ ರಾವ್ ಕಿದಿಯೂರು, ಚಂದ್ರಕಾಂತ್ ಶೆಟ್ಟಿ, ರಾಧಾಕೃಷ್ಣ ಆಚಾರ್ಯ, ಶಿವಾ ನಂದ ಭಂಡಾರ್ಕಾರ್, ಲಕ್ಷ್ಮಣ, ಕೃಷ್ಣ ಕುಮಾರ್ ಶೆಟ್ಟಿ, ದೇವಳ ಅರ್ಚಕರಾದ ರಾಮಚಂದ್ರ ಭಟ್, ವಾಸುದೇವ ಭಟ್, ದೇಜಪ್ಪ ಕೋಟ್ಯಾನ್, ಜಗದೀಶ್ ಕೋಟ್ಯಾನ್, ಭೋಜರಾಜ್ ಕಿದಿಯೂರು ಮೊದಲಾದವರು ಹಾಜರಿದ್ದರು. ರಮೇಶ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.