ಸ್ವಸಹಾಯ ಸಂಘದ ಮೂಲಕ ಮಹಿಳೆಯರ ಅಭಿವೃದ್ಧಿ ಸಾಧ್ಯ: ಹೇಮಂತ್ ಕುಮಾರ್
ಉಡುಪಿ, ಮಾ.31: ಆರ್ಥಿಕವಾಗಿ ಸಬಲರಾದರೇ ಮಹಿಳೆ ಸ್ವತಂತ್ರ ಸ್ವಾವ ಲಂಬಿ ಜೀವನ ನಡೆಸಬಹುದು. ಅದನ್ನು ಸಾಧಿಸಲು ಸ್ವಸಹಾಯ ಸಂಘಗಳು ಪೂರಕ ಸಹಕಾರ ನೀಡುತ್ತವೆ. ಈ ಬಗ್ಗೆ ಮಹಿಳೆಯರು ಹೆಚ್ಚಿನ ಗಮನ ಹರಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತೋನ್ಸೆ ಕೆಮ್ಮಣ್ಣು ಗ್ರಾಪಂ ನೋಡಲ್ ಅಧಿಕಾರಿಯಾದ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶ ಹೇಮಂತ ಕುಮಾರ್ ಹೇಳಿದ್ದಾರೆ.
ತೋನ್ಸೆ ಕೆಮ್ಮಣ್ಣು ಗ್ರಾಪಂನಲ್ಲಿ ಮಹಿಳಾ ಸ್ನೇಹಿ ಪಂಚಾಯತ್ ಅಭಿಯಾನಕ್ಕೆ ಪೂರಕವಾಗಿ ನಡೆದ 2020-21ನೇ ಸಾಲಿನ ಮಹಿಳಾ ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಅವರು ಮಾತನಾಡುತ್ತಿದ್ದರು.
ಅವಿಭಕ್ತ ಕುಟುಂಬ ನಶಿಸುತ್ತಿರುವ ಹಿನ್ನಲೆಯಲ್ಲಿ ಕೃಷಿ ನೆನೆಗುದಿಗೆ ಬೀಳು ತ್ತಿದೆ. ಅದರ ಬದಲು ತೋಟಗಾರಿಕೆಯತ್ತ ಹೋಗಬಹುದಾಗಿದೆ. ಶ್ರೀಗಂಧ ಮತ್ತು ಬಿದಿರನ್ನು ಬೆಳೆಯುವ ಮೂಲಕ ಆರ್ಥಿಕವಾಗಿಯೂ ಸಬಲತೆ ಸಾಧ್ಯವಿದೆ. ಈಗಾಗಲೇ ಮಹಿಳೆಯರಿಗೆ ಶೇ.33 ಮೀಸಲಾತಿಯನ್ನು ಎಲ್ಲಾ ರಂಗದಲ್ಲೂ ನೀಡಲಾಗುತ್ತಿದ್ದು, ಗ್ರಾಪಂ ಪ್ರಾತಿನಿಧ್ಯದಲ್ಲಿ ಶೇ.50 ಮೀಸಲಾತಿ ಕಲ್ಪಿಸಲಾಗಿದೆ ಎಂದರು.
ಗ್ರಾಮಸಭೆಯಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ವಸತಿ ನಿರ್ಮಿಸಲು ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ಯೋಜನೆಗೆ ಆಯ್ಕೆ ಮಾಡಲಾಯಿತು. ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ ರಚಿಸಿ ಅದಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಉಡುಪಿ ಜಿಲ್ಲಾ ಮಹಿಳಾ ಶಕ್ತಿ ಕೇಂದ್ರದ ಪ್ರತಿನಿಧಿ ಶಾರದಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಚಂದು, ಮಲ್ಪೆ ಠಾಣಾ ಎಸ್ಸೈ ತಿಮ್ಮೇಶ್, ಹೂಡೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ರಮೇಶ್, ಗ್ರಾಮ ಲೆಕ್ಕಿಗ ಜಗದೀ್ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಲತಾ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲಾ ಸ್ವಾಗತಿಸಿದರು. ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ವಂದಿಸಿದರು. ಕಾರ್ಯದರ್ಶಿ ದಿನಕರ ಕಾರ್ಯಕ್ರಮ ನಿರ್ವಹಿಸಿದರು