ಸಹಕಾರಿ ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿಯಾಗುವೆ: ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ, ಎ.1: ಸಹಕಾರಿ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಈ ಎಲ್ಲ ಸಮಸ್ಯೆ ಗಳಿಗೆ ಧ್ವನಿಯಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ನೂತನ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.
ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಗುರುವಾರ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಮುಖ್ಯಮಂತ್ರಿಗಳು, ಸಹಕಾರಿ ಸಚಿವರೊಂದಿಗೆ ನಿರಂತರ ಸಂಪರ್ಕ ಹೊಂದಿರುವುದರಿಂದ ಸಹಕಾರಿ ಕ್ಷೇತ್ರದ ಪರವಾಗಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಾನು 21 ಮತಗಳನ್ನು ಪಡೆದು ನಿರ್ದೇಶಕನಾಗಿ ಆಯ್ಕೆ ಯಾಗಲು ಬಡಗಬೆಟ್ಟು ಸೊಸೈಟಿಯೂ ಕಾರಣವಾಗಿದೆ ಎಂದರು.
ಬಡಗಬೆಟ್ಟು ಸೊಸೈಟಿಯು 1991ರಿಂದ ಸ್ವಂತ ಬಂಡವಾಳಗಳಿಂದಲೇ ವ್ಯವಹಾರ ನಡೆಸುತ್ತಿದೆ. ಅದು ಬಿಟ್ಟು ಬೇರೆ ಬ್ಯಾಂಕ್ಗಳಿಂದ ಒಂದು ರೂಪಾಯಿ ಸಾಲ ಮಾಡಿಲ್ಲ. 4669ರೂ. ಠೇವಣಿ ಇದ್ದ ಸೊಸೈಟಿ ಇಂದು 350ಕೋಟಿ ರೂ.ಗೆ ಏರಿಕೆಯಾಗಿದೆ. 260ಕೋಟಿ ರೂ. ಸಾಲ ನೀಡಲಾಗಿದೆ. ಪ್ರತಿವರ್ಷ ಸರಾಸರಿ 13ಕೋಟಿ ರೂ. ಲಾಭ ಪಡೆಯುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಶ್ರಮವೇ ಮುಖ್ಯ ಕಾರಣ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್ ಅಭಿನಂದನಾ ಭಾಷಣ ಮಾಡಿದರು. ಶ್ವೇತಾ ಜಯಕರ ಶೆಟ್ಟಿ, ಶತಮಾನೋತ್ಸವ ಸಮಿತಿಯ ಸಂಚಾಲಕ ಪುರುಷೋತ್ತಮ ಪಿ.ಶೆಟ್ಟಿ, ಸೊಸೈಟಿಯ ಉಪಾಧ್ಯಕ್ಷ ಎಲ್.ಉಮಾ ನಾಥ್, ನಿರ್ದೇಶಕರಾದ ವಸಂತ ಕಾಮತ್, ಪದ್ಮನಾಭ ನಾಯಕ್, ವಿನಯ ಕುಮಾರ್, ಹಾಜಿ ಯು.ಅಬ್ದುಲ್ ರಝಾಕ್, ರಘುರಾಮ್ ಎಸ್.ಶೆಟ್ಟಿ, ಜಯಾನಂದ್ ಮೈಂದನ್, ಜಾರ್ಜ್ ಸ್ಯಾಮುವೆಲ್, ಸದಾಶಿವ ನಾಯಕ್, ಜಯಾ ಶೆಟ್ಟಿ, ಗಾಯತ್ರಿ ಎಸ್.ಭಟ್ ಉಪಸ್ಥಿತರಿದ್ದರು.
ಉಡುಪಿ ಶಾಖೆಯ ಶಾಖಾ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್ ವಂದಿಸಿದರು. ಮಣಿಪಾಲ ಶಾಖಾ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು.