ಮಾನಸಿಕ- ದೈಹಿಕ ಆರೋಗ್ಯಕ್ಕೆ ಯೋಗ ಪೂರಕ: ಹರಿರಾಂ ಶಂಕರ್‌

Update: 2021-04-07 07:52 GMT

ಮಂಗಳೂರು, ಎ.7: ಯೋಗದ ವಿವಿಧ ಆಸನಗಳು ದೇಹದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸದೃಢತೆಗೆ ಪೂರಕ ಎಂದು ಮಂಗಳೂರು ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಅಭಿಪ್ರಾಯಿಸಿದ್ದಾರೆ.

ಅವರು ಇಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ 21 ದಿನಗಳ ಕಾಲ ಆಯೋಜಿಸಲಾಗಿರುವ ಉಚಿತ ಯೋಗ ತರಬೇತಿ ಶಿಬಿರವನ್ನು ನಗರದ ಪತ್ರಿಕಾ ಭವನದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ದೈನಂದಿನ ಕೆಲಸದ ಒತ್ತಡದ ನಿವಾರಣೆಗೆ ಪತ್ರಕರ್ತರಿಗೆ ಯೋಗ ಶಿಬಿರ ಸಹಕಾರಿಯಾಗಲಿದೆ. ಯೋಗ ಮನಸ್ಸು, ಹೃದಯ ಮತ್ತು ದೇಹಕ್ಕೆ ಆಹ್ಲಾದವನ್ನು ನೀಡುತ್ತದೆ ಎಂದರು.

ಪತಂಜಲಿ ಯೋಗ ಕೇಂದ್ರದ ಡಾ.ಎಂ.ಜಗದೀಶ್ ಶೆಟ್ಟಿ ಪತ್ರಕರ್ತರಿಗೆ ಶಿಬಿರದಲ್ಲಿ ಯೋಗಾಸನ ತರಬೇತಿ ನೀಡಲಿದ್ದು, ಅವರು ಮಾತನಾಡಿ, ದೈಹಿಕ ಸಮಸ್ಯೆಗಳ ಜತೆಯಲ್ಲೇ ಮಾನಸಿಕ ರೋಗಕ್ಕೆ ಶ್ರೇಷ್ಠ ಮದ್ದು ಯೋಗ ಎಂದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.

ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ವಂದಿಸಿದರು. ಬಳಿಕ ಯೋಗಗುರು ಡಾ. ಜಗದೀಶ್ ಶೆಟ್ಟಿ ಯೋಗಾಸನಗಳ ಬಗ್ಗೆ ಕಿರು ಪ್ರಾತ್ಯಕ್ಷಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News