ಕೊರಗಜ್ಜನ ಕ್ಷೇತ್ರ ಮಲಿನ ಪ್ರಕರಣ; ಶಂಕಿತ ಆರೋಪಿಗಳ ವಿರುದ್ಧ ಸಾಕ್ಷ್ಯ ಸಿಕ್ಕಿಲ್ಲ: ಕಮಿಷನರ್ ಶಶಿಕುಮಾರ್
Update: 2021-04-07 17:45 GMT
ಮಂಗಳೂರು, ಎ.7: ಕೊರಗಜ್ಜನ ಕ್ಷೇತ್ರಗಳ ಕಾಣಿಕೆ ಹುಂಡಿಗೆ ಅನಪೇಕ್ಷಿತ ವಸ್ತುಗಳನ್ನು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರದ ಹಿಂದೆ ಪೊಲೀಸರ ವಶವಾಗಿದ್ದ ಇಬ್ಬರು ಶಂಕಿತ ಆರೋಪಿಗಳ ವಿರುದ್ಧ ಇನ್ನೂ ಕೂಡ ಪೂರಕ ಸಾಕ್ಷ್ಯಗಳು ದೊರೆತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫೀಕ್ ಎಂಬವರನ್ನು ಠಾಣೆಗೆ ಕರೆಯಿಸಿ 4 ದಿನಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಅವರ ವಿರುದ್ಧ ಸೆಕ್ಷನ್ 169ರನ್ವಯ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿದೆ. ಇನ್ನೂ ಕೂಡ ಪೂರಕ ಸಾಕ್ಷ್ಯಗಳು ದೊರೆತಿಲ್ಲ. ಸಾಕ್ಷ್ಯಗಳು ದೊರೆತರೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.