ಕುಲಪತಿ ಹುದ್ದೆ ಲಂಚ ಪ್ರಕರಣ; ಡಾ. ಜೈಶಂಕರ್‌ರ ಪ್ರಭಾರ ಹುದ್ದೆ ರದ್ದು: ಮಂಗಳೂರು ವಿವಿ ಕುಲಪತಿ

Update: 2021-04-07 17:11 GMT

ಮಂಗಳೂರು, ಎ.7: ರಾಯಚೂರು ವಿವಿಯಲ್ಲಿ ಕುಲಪತಿ ಹುದ್ದೆ ಪಡೆಯುವುದಕ್ಕಾಗಿ ರಾಮಸೇನೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರನಿಗೆ 17:50 ಲಕ್ಷ ರೂ. ಲಂಚ ನೀಡಿ ಬಳಿಕ ಪೊಲೀಸ್ ಠಾಣೆಯ ಮೆಟ್ಟಲೇರಿದ್ದ ಮಂಗಳೂರು ವಿವಿಯ ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಜೈಶಂಕರ್‌ಗೆ ವಹಿಸಲಾಗಿದ್ದ ಪ್ರಭಾರ ಹುದ್ದೆಯೊಂದನ್ನು ರದ್ದುಪಡಿಸಿ ಮಂಗಳೂರು ವಿವಿ ಕುಲಪತಿ ಆದೇಶ ಹೊರಡಿಸಿದ್ದಾರೆ.

ಪ್ರಾಧ್ಯಾಪಕ ಡಾ.ಎಂ.ಜೈಶಂಕರ್‌ಗೆ ಮಂಗಳೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಹುದ್ದೆಯ ಪ್ರಭಾರವನ್ನು ಈ ಹಿಂದೆ ವಹಿಸಲಾಗಿತ್ತು. ಆದರೆ ಜೈಶಂಕರ್ ಕುಲಪತಿ ಹುದ್ದೆ ಪಡೆಯಲು ಲಂಚ ನೀಡಿದ ಆರೋಪ ಕೇಳಿ ಬಂದ ಬಳಿಕ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗಿತ್ತು. ಅಲ್ಲದೆ ಜೈಶಂಕರ್ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಇದೀಗ ಜೈಶಂಕರ್‌ಗೆ ವಹಿಸಲಾಗಿದ್ದ ಪ್ರಭಾರ ಹುದ್ದೆಯನ್ನು ರದ್ದುಪಡಿಸಿ ಆದೇಶಿಸಲಾಗಿದೆ. ಈ ಬಗ್ಗೆ ಜೈಶಂಖರ್‌ಗೆ ಜ್ಞಾಪನಾಪತ್ರ ನೀಡಲಾಗಿದೆ. ಅಲ್ಲದೆ ಸಿಂಡಿಕೇಟ್ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಜೈಲು ಪಾಲಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು ಸಿಕ್ಕಿದೆ. ಆದರೆ ಲಂಚ ನೀಡಿದ ಪ್ರಾಧ್ಯಾಪಕ ಮತ್ತು ಲಂಚ ಪಡೆದ ಪ್ರಸಾದ್ ಅತ್ತಾವರನ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ನಾಲ್ಕು ಮಂದಿಯ ಬಂಧನ ಇನ್ನೂ ಆಗಿಲ್ಲ. ಪೊಲೀಸರು ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News