ನೀಲಾವರದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ
ಉಡುಪಿ, ಎ.8: ಬ್ರಹ್ಮಾವರ ತಾಲೂಕು ನೀಲಾವರದ ಮಹಿಷಮರ್ದಿನಿ ದೇವಸ್ಥಾನದ ಒಳಪ್ರದಕ್ಷಿಣಾ ಪಥದಲ್ಲಿ ವಿಜಯನಗರ ಕಾಲದ ಶಾಸನ ವೊಂದು ಪತ್ತೆಯಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ (ಮಾಹೆ) ದ ಆಡಳಿತಾಧಿಕಾರಿ ಹಾಗೂ ಇತಿಹಾಸ ಸಂಶೋಧಕ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಬ್ರಹ್ಮಾವರ ಕ್ರಾಸ್ಲ್ಯಾಂಡ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಗುರುಮೂರ್ತಿ ಕೆ.ಕೆ ಹಾಗೂ ಸಂಶೋಧಕ ಶ್ರುತೇಶ್ ಆಚಾರ್ಯ ಇವರ ಸಹಾಯದಿಂದ ಓದಲಾದ ಈ ಶಾಸನವನ್ನು ಕ್ರಿ.ಶ 1468ರಲ್ಲಿ ಬರೆಸಲಾಗಿದ್ದು, ಆಗ ವಿಜಯನಗರದ ಅರಸನಾಗಿದ್ದ ವಿರೂಪಾಕ್ಷ ಮಹಾರಾಯನ ಕಾಲದ್ದಾಗಿದೆ.
ಆಗ ಬಾರಕೂರಿನ ರಾಜ್ಯಪಾಲನಾಗಿದ್ದವನು ವಿಠರಸ ಒಡೆಯ. ಇದೊಂದು ಧರ್ಮಶಾಸನ. ಇಲ್ಲಿ ನೀಲಾವರ ಗ್ರಾಮ ನಿಳುವರದ ಗ್ರಾಮ ಎಂಬುದಾಗಿ ಉಲ್ಲೇಖಿತವಾಗಿದೆ. ಹೆಚ್ಚಿನ ವಿಜಯನಗರ ಶಾಸನಗಳಲ್ಲಿ ರಾಜನ ಬಗ್ಗೆ ಹೇಳುವಾಗ ‘ಚತುಸ್ಸಮುದ್ರಾಧಿಪತಿ’ ಎಂಬ ಉಲ್ಲೇಖ ಬರುತ್ತದೆಯಾದರೂ ಇಲ್ಲಿ ರಾಜನ ಬಗ್ಗೆ ಹೇಳುವಾಗ ಅವನು ದಕ್ಷಿಣ ಪಶ್ಚಿಮ ಸಮುದ್ರದ ಮಧ್ಯೆ ಸಮಸ್ತವನು ಪ್ರತಿಪಾಲಿಸುತ್ತಿದ್ದ ಎಂಬುದಾಗಿ ಹೇಳಲಾಗಿದೆ.
ಇದನ್ನು ಸಂಗಮ ವಂಶದ ಕೊನೆಗಾಲದಲ್ಲಿ ರಾಜಕೀಯ ಹಿನ್ನಡೆಯ ಸೂಚನೆ ಎಂದೂ ಭಾವಿಸಬಹುದು. ಅಲ್ಲದೆ ಯೆಲ್ಲಪ್ಪ ಒಡೆಯ ಹಾಗೂ ಮಾಬಯ್ಯ ಒಡೆಯನ ಉಲ್ಲೇಖವೂ ಬರುತ್ತದೆ. ತೆಂಗಿನೆಣ್ಣೆಗೆ ಇದ್ದ ಪ್ರಾಮುಖ್ಯತೆ ಇಲ್ಲಿ ವ್ಯಕ್ತವಾಗಿದೆ. ಶಾಪವಾಕ್ಯಗಳನ್ನು ಉಲ್ಲೇಖಿಸುವಾಗ ಶಾಸನ ರಕ್ಷಿಸಿದರೆ ಸಿಗುವ ಪುಣ್ಯದ ಬಗ್ಗೆ ಹೇಳುವಾಗ ದೇವರಿಗೆ ತೆಂಗಿನೆಣ್ಣೆ ಹೊಯ್ದ ಫಲ ಎಂದಿರುವುದು ಬಹಳ ವಿಶೇಷವಾಗಿದೆ.
ಈ ಶಾಸನದ ಬಗ್ಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸುಧೀರ ಕುಮಾರ್ ಶೆಟ್ಟಿ ತಿಳಿಸಿದ್ದು, ಸಂಶೋಧಕ ಸುಬಾಷ ನಾಯಕ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ ಇದರ ಪ್ರತಿಮಾಡಲು ಸಹಕರಿಸಿದ್ದಾರೆ ಎಂದು ಡಾ.ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾರಕೂರಿನಲ್ಲೂ ಪತ್ತೆ: ಬಾರಕೂರಿನ ಮಣಿಗಾರ ಕೇರಿಯ ಸೋಮನಾಥೇಶ್ವರ ದೇವಸ್ಥಾನದ ಆವರಣದಲ್ಲೂ ಮಣ್ಣಿನ ಅಡಿಯಲ್ಲಿ ಶಿಲಾಶಾಸನ ಪತ್ತೆಯಾಗಿದೆ. ಇದು ಸಹ ವಿಜಯನಗರಕಾಲದ ಶಾಸನವಾಗಿದ್ದು ಸೋಮನಾಥೇಶ್ವರ ದೇವಸ್ಥಾನದ ಉಲ್ಲೇಖ ಹಾಗೂ ದಾನ ನೀಡಿದ ವಿವರ ಗಳಿವೆ. ಇದರ ಅಧ್ಯಯನವನ್ನು ಸಂಶೋಧಕ ಶ್ರುತೇಶ್ ಆಚಾರ್ಯ ಅವರ ಸಹಾಯದಿಂದ ಮಾಡಲಾಗುತ್ತಿದೆ ಎಂದು ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.