ಕುತ್ತಾರ್: ಬಸ್-ಬೈಕ್ ಅಪಘಾತ; ಓರ್ವ ಮೃತ್ಯು
Update: 2021-04-10 04:29 GMT
ಉಳ್ಳಾಲ: ಬೈಕ್ಗೆ ಸಿಟಿಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕುತ್ತಾರ್ ಸಮೀಪ ನಡೆದಿದೆ.
ಪೊಳಲಿ ನಿವಾಸಿ ಮಹಮ್ಮದ್ ಶಾಫಿ(20) ಮೃತಪಟ್ಟವರು. ಸಹಸವಾರರಾದ ರಾಣಿಪುರ ನಿವಾಸಿ ಮುಹಮ್ಮದ್ ಇಮ್ರಾನ್(20) ಮತ್ತು ಕಲ್ಲಡ್ಕ ನಿವಾಸಿ ಮಹಮ್ಮದ್ ಮೌಸೀನ್(23) ಗಾಯಗೊಂಡಿದ್ದಾರೆ. ಇವರು ಮಂಗಳೂರಿನಿಂದ ರಾಣಿಪುರದಲ್ಲಿರುವ ಸ್ನೇಹಿತನ ಮನೆಗೆ ಹೋಗುತ್ತಿದ್ದ ಸಂದರ್ಭ ಕುತ್ತಾರು ಕೊರಗಜ್ಜನ ಕಟ್ಟೆ ಬಳಿ ತಲುಪಿದಾಗ ಮುಂದಿದ್ದ ವಾಹನವನ್ನು ಓವರ್ಟೇಕ್ ಮಾಡವ ಸಂದರ್ಭ ಎದುರಿನಿಂದ ಬಂದ ಸಿಟಿಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ ಶಾಫಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಾಗುರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.