ಬೆಂಗಳೂರು ಸ್ಫೋಟ ಪ್ರಕರಣ: ಮಅದನಿ ಮನವಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ
Update: 2021-04-12 18:56 GMT
ಹೊಸದಿಲ್ಲಿ, ಎ. 12: ತನಗೆ ಕೇರಳಕ್ಕೆ ತೆರಳಲು ಹಾಗೂ ವಿಚಾರಣೆ ಮುಗಿಯುವ ವರೆಗೆ ಅಲ್ಲೆ ನೆಲೆಸಲು ಅನುಮತಿ ನೀಡುವಂತೆ ಕೋರಿ 2008ರ ಬೆಂಗಳೂರು ಸರಣಿ ಬಾಂಬ್ ಸ್ಪೋಟ ಪ್ರಕರಣದ ಆರೋಪಿಯಾಗಿರುವ ಕೇರಳದ ಪಿಡಿಪಿ ನಾಯಕ ಅಬ್ದುಲ್ ನಾಸರ್ ಮಅದನಿ ಸಲ್ಲಿಸಿದ ಮನವಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣೀಯನ್ ಸೋಮವಾರ ಹಿಂದೆ ಸರಿದಿದ್ದಾರೆ.
“ನಮ್ಮಲ್ಲಿ ಒಬ್ಬರು (ವಿ. ರಾಮಸುಬ್ರಹ್ಮಣೀಯನ್) ಸದಸ್ಯರಾಗಿರದ ಇನ್ನೊಂದು ಪೀಠದ ಮುಂದೆ ಮುಂದಿನ ವಾರ ಈ ಪ್ರಕರಣದ ವಿಚಾರಣೆ ನಿಗದಿಪಡಿಸಲಾಗುವುದು” ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಬೊಬ್ಡೆ ನೇತೃತ್ವದ ಪೀಠ ತನ್ನ ಆದೇಶದಲ್ಲಿ ಹೇಳಿದೆ. ಈ ಹಿಂದೆ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಮಅದನಿ ವಿಚಾರಣೆಗೆ ಹಾಜರಾಗಿದ್ದಾಗ ತಾನು ಅವರ ಪರ ವಕೀಲನಾಗಿದ್ದೆ ಎಂದು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆದ ಸಂದರ್ಭ ರಾಮಸುಬ್ರಹ್ಮಣೀಯನ್ ಹೇಳಿದರು.