ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆ : ಸಿಡಿಲು ಬಡಿದು ಇಬ್ಬರಿಗೆ ಗಾಯ

Update: 2021-04-14 14:10 GMT

ಉಡುಪಿ : ಜಿಲ್ಲೆಯಾದ್ಯಂತ ಕಳೆದ ರಾತ್ರಿ  ಗುಡುಗು ಸಹಿತ ಭಾರಿ ಮಳೆಯಾಗಿದ್ದು ಹಲವು ಕಡೆ ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಬ್ರಹ್ಮಾವರ ತಾಲೂಕಿನ ನೈಲಾಡಿ ಬೂದಾಡಿಯ ನಾಗರತ್ನ ಭುಜಂಗ ಶೆಟ್ಟಿ ಎಂಬವರ ಮನೆಗೆ ತಡರಾತ್ರಿ ಸಿಡಿಲು ಬಡಿದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅವರ ಮನೆಯಲ್ಲಿ ಮಗು ಸೇರಿದಂತೆ ಆರು ಜನ ಇದ್ದರು. ಮನೆಯೊಳಗಿದ್ದ ಮಹಿಳೆಯ ಕೈ ಮೇಲೆ ವಿದ್ಯುತ್ ಕಿಡಿ ತಾಗಿ ಸುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.

ಅದೇ ರೀತಿ ನೀಲಾವರ ಎಂಬಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಸ್ಥಳೀಯ ನಿವಾಸಿ ರತನ್ ಶೆಟ್ಟಿ ಎಂಬವರಿಗೆ ಸಿಡಿಲು ಬಡಿದು ಗಾಯವಾಗಿರುವ ಬಗ್ಗೆ ವರದಿಯಾಗಿದೆ. ಇವರು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಾಲ್ಲೂಕು ಕಚೇರಿಯ ಮೂಲಗಳು ತಿಳಿಸಿವೆ.

ಅಲ್ಲದೆ ಕಾಪು ತಾಲ್ಲೂಕಿನಾದ್ಯಂತ ರಾತ್ರಿ ಭಾರೀ ಗುಡುಗು ಸಹಿತ ಮಳೆಯಾಗಿದೆ ಮತ್ತು ಕಾರ್ಕಳ ತಾಲ್ಲೂಕು ಹಾಗೂ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಸಿಡಿಲು ಸಹಿತ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಮನೆಗಳ ಮೇಲೆ ಮರ ಬಿದ್ದು ಹಾನಿ: ಬೈಂದೂರು ತಾಲೂಕು ಯಡ್ತರೆ ಗ್ರಾಮದ ಮೋಹನ್ ಶೇಟ್, ಕೆರ್ಗಾಲು ಗ್ರಾಮದ ಭಾಸ್ಕರ ಕೊಠಾರಿ ಹಾಗೂ ಪಡುವರಿ ಗ್ರಾಮದ ಕುಪ್ಪಯ್ಯ ಶೇರಿಗಾರ್ ಇವರ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಸುಮಾರು ಮೂರು ಲಕ್ಷ ರೂ. ನಷ್ಟ ಸಂಭವಿಸಿರುವ ಬಗ್ಗೆ ವರದಿಗಳು ಬಂದಿವೆ.

ಬೈಂದೂರು ತಾಲೂಕಿನ ಯೋಜನಾ ನಗರದ ಸೀತು ಇವರ ವಾಸ್ತವ್ಯದ ಮನೆ ಮೇಲೆ ಭಾರೀ ಗಾತ್ರದ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು ಎರಡು ಲಕ್ಷ ರೂ.ನಷ್ಟ ಸಂಭವಿಸಿದೆ. ಇನ್ನು ತಾಲೂಕಿನ ಬಿಜೂರು ಗ್ರಾಮದ ಚಂದು ಗಾಣಿಗರ ಮನೆ ಮೇಲೆ ಮರ ಬಿದ್ದು, ನಾವುಂದ ಗ್ರಾಮದ ನಾಗೇಶ್ ಪೂಜಾರಿ ಎಂಬವರ ಮನೆಯ ಹೆಂಚು ಗಾಳಿಗೆ ಹಾರಿ ಹೋಗಿದ್ದು ಸುಮಾರು ಒಂದು ಲಕ್ಷ ರೂ.ನಷ್ಟ ಸಂಭವಿಸಿದೆ.
 ಹೆಬ್ರಿ ತಾಲೂಕು ಆಲ್ಬಾಡಿ ಗ್ರಾಮದ ಮಾಬಣ್ಣ ಪೂಜಾರಿ ಹಾಗೂ ಬೆಳ್ವೆ ಗ್ರಾಮದ ಶೀನಪ್ಪ ಶೆಟ್ಟಿ ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು ಒಟ್ಟು 75,000 ನಷ್ಟದ ಅಂದಾಜು ಮಾಡಲಾಗಿದೆ. ತಾಲೂಕಿನ ಬೇಳಂಜೆ ಗ್ರಾಮದ ಅಶೋಕ ಶೆಟ್ಟಿ ಎಂಬವರ ಮನೆಯ ತೋಟದ ಅಡಿಕೆ, ತೆಂಗಿನ ಮರಗಳು ಧರಾಶಾಹಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಕಾಪುವಲ್ಲಿ 42ಮಿ.ಮೀ., ಕಾರ್ಕಳದಲ್ಲಿ 30ಮಿಮಿ., ಉಡುಪಿಯಲ್ಲಿ 34 ಮಿ.ಮೀ., ಬೈಂದೂರಿನಲ್ಲಿ 21 ಮಿ.ಮೀ., ಬ್ರಹ್ಮಾವರ ಹಾಗೂ ಹೆಬ್ರಿ ತಲಾ 18ಮಿ.ಮೀ. ಮಳೆಯಾಗಿರುವ ಬಗ್ಗೆ ಮಾಹಿತಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News