ಕುಂಭಮೇಳಕ್ಕೆ ಆಗಮಿಸಿದ 102 ಭಕ್ತರಿಗೆ ಕೊರೋನ ಪಾಸಿಟಿವ್ ವರದಿ
ಹರಿದ್ವಾರ್: ಕುಂಭ ಮೇಳಕ್ಕೆ ಆಗಮಿಸಿದ ಕನಿಷ್ಠ 102 ಭಕ್ತಾದಿಗಳು ಕೋವಿಡ್ ಪಾಸಿಟಿವ್ ಆಗಿರುವುದು ವರದಿಯಾಗಿದ್ದರೂ ಪ್ರತಿ ದಿನ ಆಗಮಿಸುವ ಲಕ್ಷಾಂತರ ಮಂದಿಯ ಪೈಕಿ ಕೆಲವೇ ಕೆಲವು ಮಂದಿಯನ್ನು ಪರೀಕ್ಷಿಸಲಾಗುತ್ತಿದೆ ಹಾಗೂ ಇತರ ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆಯಾಗುತ್ತಿವೆ ಎಂಬ ವರದಿಗಳ ನಡುವೆಯೇ ಪ್ರತಿಕ್ರಿಯಿಸಿರುವ ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್, ಕುಂಭ ಮೇಳ ಒಂದು `ಸೂಪರ್ ಸ್ಪ್ರೆಡರ್ ಕಾರ್ಯಕ್ರಮವಲ್ಲ' ಎಂದು ಹೇಳಿದ್ದಾರೆ.
ಇದಕ್ಕೆ ಪುಷ್ಠೀಕರಣವನ್ನೂ ನೀಡಿದ ಅವರು ಕುಂಭ ಮೇಳಕ್ಕೆ ಆಗಮಿಸಿದ್ದ 53,000 ಮಂದಿಯನ್ನು ಪರೀಕ್ಷಿಸಲಾಗಿದ್ದು ಹಾಗೂ ಪಾಸಿಟಿವಿಟಿ ಪ್ರಮಾಣ ಶೇ1.5ರಷ್ಟಾಗಿದೆ ಹಾಗೂ ಅಲ್ಲಿಗೆ ಆಗಮಿಸಿದ ಶೇ90ರಷ್ಟು ಮಂದಿ ಹರಿದ್ವಾರದಲ್ಲಿ ತಂಗುವುದಿಲ್ಲವಾದುದರಿಂದ ಅವರು ಕೋವಿಡ್ ಹರಡುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಆದರೆ ಕುಂಭ ಮೇಳಕ್ಕೆ ಆಗಮಿಸಿ ಮರಳಿದವರು ಕೋವಿಡ್ ಹರಡುವ ಸಾಧ್ಯತೆಯ ಕುರಿತು ಅವರು ಮಾತನಾಡಿಲ್ಲ. ಆದರೆ ಕುಂಭ ಮೇಳದಂತಹ ಬೃಹತ್ ಕಾರ್ಯಕ್ರಮದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಸಾಧ್ಯವಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.