ಕಾಸರಗೋಡು: ಮೀನುಗಾರಿಕೆ ಸಂದರ್ಭ ಸಿಡಿಲು ಬಡಿದು ಮೀನುಗಾರ ಮೃತ್ಯು
Update: 2021-04-13 09:37 GMT
ಕಾಸರಗೋಡು: ಮೀನುಗಾರಿಕೆ ಸಂದರ್ಭದಲ್ಲಿ ಸಿಡಿಲು ಬಡಿದು ಮೀನುಗಾರರೋರ್ವರು ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ಕಾಸರಗೋಡು ಸಮುದ್ರದಲ್ಲಿ ನಡೆದಿದೆ. ಮೃತಪಟ್ಟವರನ್ನು ಅಡ್ಕತ್ತಬೈಲ್ ಶ್ರೀ ಕುರುಂಭಾ ಕ್ಷೇತ್ರ ಸಮೀಪದ ಬಾಬು ರಾಜ್ (40) ಎಂದು ಗುರುತಿಸಲಾಗಿದೆ.
ಜೊತೆಗಿದ್ದ ಕೃಷ್ಣ ಎಂಬವರು ಗಾಯಗೊಂಡಿದ್ದಾರೆ.
ಮುಂಜಾನೆ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬಾಬು ರಾಜ್, ಕೃಷ್ಣ, ಸುಜಿ ಮತ್ತು ಬಾಬು ಎಂಬವರು ಭಾಗ್ಯಲಕ್ಷ್ಮಿ ಎಂಬ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಬೋಟು ಅಳಿವೆ ಬಾಗಿಲು ತಲಪುತ್ತಿದ್ದಂತೆ ಭಾರೀ ಗಾಳಿ, ಮಳೆ ಜೊತೆ ಮಿಂಚಿನ ಆರ್ಭಟ ಪ್ರಾರಂಭವಾಗಿತ್ತು. ಈ ವೇಳೆ ಸಿಡಿಲು ಬಡಿದು ಬಾಬು ರಾಜ್ ಮೃತಪಟ್ಟಿದ್ದಾರೆ.
ಜಿಲ್ಲೆಯ ಹಲವೆಡೆ ಗಾಳಿ ಮಳೆ ಜೊತೆ ಗುಡುಗು ಮಿಂಚಿಗೆ ಅಪಾರ ಹಾನಿ ಉಂಟಾಗಿದೆ. ಕಾಸರಗೋಡು, ಬದಿಯಡ್ಕ, ಪೆರ್ಲ, ಮುಳ್ಳೇರಿಯ, ಉದುಮ ಮೊದಲಾದೆಡೆ ಮಳೆಗೆ ಅಪಾರ ಹಾನಿ ಉಂಟಾಗಿದೆ.