×
Ad

ಮಣಿಪಾಲ ಕೆಎಂಸಿಯಲ್ಲಿ ಐಸಿಯು ಹಾಸಿಗೆಗಳ ಕೊರತೆ

Update: 2021-04-14 18:29 IST
ಸಾಂದರ್ಭಿಕ ಚಿತ್ರ

ಮಣಿಪಾಲ, ಎ.14: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಐಸಿಯು ಅವಶ್ಯವಿರುವ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸದ್ಯದ ಮಟ್ಟಿಗೆ ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳು ಮತ್ತು ವೆಂಟಿಲೇಟರ್ ಹಾಸಿಗೆಗಳ ತೀವ್ರ ಕೊರತೆಯುಂಟಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಆದ್ದರಿಂದ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ರೋಗಿಗಳು / ರೋಗಿಗಳ ಆರೈಕೆದಾರರು, ಆಂಬ್ಯುಲೆನ್ಸ್ ಸೇವಾ ಪೂರೈಕೆದಾರರು ತಮ್ಮ ಸ್ಥಳದಿಂದ ಹೊರಡುವ ಮುನ್ನ ದೂರವಾಣಿ ಸಂಖ್ಯೆ: 9686692603 ಗೆ ಕರೆ ಮಾಡುವ ಮೂಲಕ, ಕಸ್ತೂರ್ಬಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳು ಮತ್ತು ವೆಂಟಿಲೇಟರ್ ಹಾಸಿಗೆಗಳು ಲಭ್ಯವಿದೆಯೇ ಎಂದು ದೃಢೀಕರಿಸಿಕೊಂಡು ಆಸ್ಪತ್ರೆಗೆ ಬರುವಂತೆ ಡಾ.ಅವಿನಾಶ್ ಶೆಟ್ಟಿ ವಿನಂತಿಸಿದ್ದಾರೆ.

ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರುಗಳ ತೀವ್ರ ಕೊರತೆಯ ದೃಷ್ಟಿಯಿಂದ ಈ ಕರೆ ಮತ್ತು ದೃಢೀಕರಣ ಅವಶ್ಯಕವಾಗಿದೆ. ಇದರಿಂದ ಕಸ್ತೂರ್ಬಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಗುವ ಅನಾನುಕೂಲತೆಯನ್ನು ತಪ್ಪಿಸಬಹುದಾಗಿದೆ ಎಂದವರು ಹೇಳಿದ್ದಾರೆ.

ಕೊರೋನ ರೋಗಿಗಳ ಸಂಖ್ಯೆ ಹೆಚ್ಚಿಲ್ಲ: ಐಸಿಯು ಕೊರತೆಗೆ ಕೊರೋನ ರೋಗಿಗಳ ಸಂಖ್ಯೆಯಲ್ಲಿ ಉಂಟಾದ ಹೆಚ್ಚಳ ಕಾರಣವಲ್ಲ. ಕೆಎಂಸಿಯಲ್ಲಿ ಸದ್ಯ ಕೇವಲ 22 ಕೊರೋನ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ. ಇವರಲ್ಲಿ ಕೇವಲ 12 ಮಂದಿ ಮಾತ್ರ ಐಸಿಯುನಲ್ಲಿದ್ದಾರೆ. ಉಳಿದ 10ಮಂದಿ ಜನರಲ್ ವಾರ್ಡಿನಲ್ಲಿದ್ದಾರೆ ಎಂದವರು ‘ವಾರ್ತಾಭಾರತಿ’ಗೆ ತಿಳಿಸಿದರು.

ಈ ಮೊದಲಿನಂತೆ ಕೆಎಂಸಿ ಕೊರೋನ ಸೋಂಕಿತರ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡನ್ನು ಮೀಸಲಿರಿಸಿದೆ. ಇಲ್ಲಿ ಸದ್ಯ ಒಟ್ಟು 40 ಮಂದಿ ಚಿಕಿತ್ಸೆಗೆ ಅವಕಾಶವಿದೆ. ಇವುಗಳಲ್ಲಿ 20 ಐಸಿಯು ಹಾಗೂ ವೆಂಟಿಲೇಟರ್ ಹಾಸಿಗೆಗಳಿವೆ. ಅಲ್ಲದೇ ಜಿಲ್ಲೆಯಲ್ಲಿ ಕೊರೋನ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿದೆ.ಸದ್ಯಕ್ಕಂತೂ ಇಲ್ಲಿ ಐಸಿಯು ಕೊರತೆಯುಂಟಾಗಲಾರದು. ನಮ್ಮಲ್ಲಿ ಕೊರೋನೇತರ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಐಸಿಯು ಕೊರತೆಯುಂಟಾಗಿದೆ ಎಂದು ಡಾ.ಅವಿನಾಶ್ ಶೆಟ್ಟಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News