ಮೀರತ್: ಕಾರಿನೊಳಗೆ ಬಿಜೆಪಿ ಕೌನ್ಸಿಲರ್ ಮೃತದೇಹ ಪತ್ತೆ

Update: 2021-04-16 16:14 GMT

ಲಕ್ನೊ, ಎ.16: ಮೀರತ್ನ ಕಂಕರ್ಖೇಡದಲ್ಲಿ ಬಿಜೆಪಿ ಕೌನ್ಸಿಲರ್ ಮನೀಶ್ ಚೌಧರಿ ಮೃತದೇಹ ಅವರ ಕಾರಿನೊಳಗೆ ಗುರುವಾರ ಪತ್ತೆಯಾಗಿದೆ. ಮೃತದೇಹದಲ್ಲಿ ಗುಂಡೇಟಿನ ಗಾಯವಿದ್ದು ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಚೌಧರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಆದರೆ ಇದು ಕೊಲೆ ಪ್ರಕರಣ ಎಂದು ಚೌಧರಿಯ ಕುಟುಂಬದವರು ಆರೋಪಿಸಿದ್ದಾರೆ. 

ಎಲ್ಲಾ ಕೋನಗಳಿಂದಲೂ ಈ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಪೇಶ್ವರ್ ಸಾಗರ್ ಹೇಳಿದ್ದಾರೆ. ಒತ್ತಡ ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಂತಿಮ ನಿರ್ಧಾರಕ್ಕೆ ಬಂದಿರುವುದಾಗಿ ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಚೌಧರಿ ತನ್ನ ಪತ್ನಿ ಹಾಗೂ ಸಂಬಂಧಿಕರಿಗೆ ಧ್ವನಿಸಂದೇಶ(ವಾಯ್ಸ್ ಮೆಸೇಜ್) ಕಳುಹಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ‌

ಮೆವ್ಲಾ ರೈಲ್ವೇ ಕ್ರಾಸಿಂಗ್ ಬಳಿ ಕಾರಿನೊಳಗೆ ಚೌಧರಿಯ ಮೃತದೇಹ ಕಂಡ ಕೂಡಲೇ ಸ್ಥಳೀಯರು ಮಾಹಿತಿ ನೀಡಿದ್ದು ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕಾರಿನ ಇಂಜಿನ್ ಸ್ಟಾರ್ಟ್ ಆದ ಸ್ಥಿತಿಯಲ್ಲಿತ್ತು ಮತ್ತು ಚೌಧರಿಯ ತಲೆಯಲ್ಲಿ ಗುಂಡಿನ ಗಾಯವಿತ್ತು. ದೇಶೀಯ ನಿರ್ಮಿತ ಪಿಸ್ತೂಲ್ ಕಾರಿನೊಳಗೆ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹೋಟೆಲ್ ನಡೆಸುತ್ತಿದ್ದ ಚೌಧರಿಗೆ ಯಾವುದೇ ಮಾನಸಿಕ ಅಥವಾ ಆರ್ಥಿಕ ಸಮಸ್ಯೆಯಿರಲಿಲ್ಲ. ಆದರೆ ಕೆಲವರೊಂದಿಗೆ ವ್ಯವಹಾರಕ್ಕೆ ಸಂಬಂಧಿಸಿದ ವೈರತ್ವವಿತ್ತು ಎಂದು ಕುಟುಂಬದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News