ಕೊಟ್ಟಾರಿ ಸೂಪರ್ ಕಿಂಗ್ಗೆ ಕೆಪಿಎಲ್ ಟ್ರೋಫಿ
ಮಂಗಳೂರು, ಎ.19: ಕೊಟ್ಟಾರಿ ಯುವ ವೇದಿಕೆಯ ಆಶ್ರಯದಲ್ಲಿ ನಡೆದ ಪ್ರತಿಷ್ಠಿತ 2ನೇ ಅವೃತಿಯ ಕೊಟ್ಟಾರಿ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯವಾಳಿಯ ರೋಚಕ ಕಾದಾಟಕ್ಕೆ ತೆರೆಬಿದ್ದಿದೆ. ಲೀಗ್ ಹಂತದಿಂದ ಪ್ರಶಸ್ತಿ ಸುತ್ತಿನ ತನಕ ಬಲಿಷ್ಠ ನಿರ್ವಹಣೆ ಪ್ರದರ್ಶಿಸುತ್ತ ಬಂದ ಕೊಟ್ಟಾರಿ ಸೂಪರ್ ಕಿಂಗ್ ತಂಡ ಈ ಬಾರಿಯ ಕೆಪಿಎಲ್ 2021ನೇ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಲೀಗ್ನ ಎಲ್ಲಾ ಪಂದ್ಯಗಳಲ್ಲಿ ಅತ್ಯುತ್ತಮ ಅಟ ಪ್ರದರ್ಶಿಸಿ ಬೌಂಡರಿ, ಸಿಕ್ಸರ್ ಸುರಿಮಳೆಗೈದ ಸೂಪರ್ ಕಿಂಗ್ನ ಯುವ ಅಟಗಾರ ಸುಕೇಶ್ ಕೊಟ್ಟಾರಿ ಅಮ್ಮುಂಜೆ ಪಂದ್ಯ ಶ್ರೇಷ್ಠ ಹಾಗೂ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಪಡೆದುಕೊಂಡರು.
ಫೈನಲ್ ಹಂತದಲ್ಲಿ ಸೋಲೊಪ್ಪಿಕೊಂಡ ಕೊಟ್ಟಾರಿ ರಾಯಲ್ಸ್ ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಎರಡು ದಿನಗಳ ಕಾಲ ಮಂಗಳೂರಿನ ಫಿಶರೀಸ್ ಕಾಲೇಜ್ ಮೈದಾನದಲ್ಲಿ ನಡೆದ ಟೂರ್ನಿಯಲ್ಲಿ ಹತ್ತು ತಂಡಗಳು ಭಾಗವಹಿಸಿದ್ದವು. ಕೊಟ್ಟಾರಿ ರೈನೋಸ್, ಕೊಟ್ಟಾರಿ ಚಾಲೆಂಜರ್ಸ್ ತಂಡ ಸೆಮಿಫೈನಲ್ಸ್ ಹಂತಕ್ಕೆ ತಲುಪಿ ಉತ್ತಮ ಪ್ರದರ್ಶನ ನೀಡಿ ಸೋಲೊಪ್ಪಿಕೊಂಡಿತು.
ಈ ವೇಳೆ ಶಾಸಕ ವೇದವ್ಯಾಸ್ ಕಾಮತ್ ಮೈದಾನದಲ್ಲಿ ಕ್ರಿಕೆಟ್ ಆಡುವ ಮೂಲಕ ಅಟಗಾರಿಗೆ ಸ್ಪೂರ್ತಿ ತುಂಬಿ ಶುಭ ಹಾರೈಸಿದರು. ಎರಡು ಮಹಿಳಾ ತಂಡಗಳು ಈ ಬಾರಿಯ ಕೆಪಿಎಲ್ ಟೂರ್ನಿಯಲ್ಲಿ ಭಾಗವಹಿಸಿ ಎಲ್ಲರ ಗಮನಸೆಳೆದರು.
ಸಂಜೆ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ,ಮಂಗಳೂರು ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೌಟ, ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ, ಕೊಟ್ಟಾರಿ ಸಮಾಜದ ಪ್ರಧಾನ ಕಾರ್ಯದರ್ಶಿ ತಾರಾನಾಥ ಕೊಟ್ಟಾರಿ, ವಿಜಯ ಕೊಟ್ಟಾರಿ ಅಡ್ಯಾರ್, ಕೊಟ್ಟಾರಿ ಸಂಘದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಧನಂಜಯ ಕೊಟ್ಟಾರಿ, ಶ್ರೀನಿವಾಸ್ ಕೊಟ್ಟಾರಿ ದೇರೆಬೈಲು, ಯುವ ವೇದಿಕೆ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.