ಕಡಬ: ನದಿಯಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು

Update: 2021-04-19 15:09 GMT

ಕಡಬ, ಎ.19. ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ನೀರಿಗೆ ಇಳಿದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ.

ಮೃತ ಯುವಕರನ್ನು ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ ಉಮ್ಮರ್ ಎಂಬವರ ಪುತ್ರ ಝಾಕಿರ್(18) ಹಾಗೂ ಉಮ್ಮರ್ ರವರ ಸಹೋದರಿಯ ಪುತ್ರ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ ನಿವಾಸಿ ಸಿನಾನ್(19) ಎಂದು ಗುರುತಿಸಲಾಗಿದೆ. ನೆಲ್ಯಾಡಿಯಲ್ಲಿ ತನ್ನ ಮಾವನ ಕೋಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಸಿನಾನ್ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿದ್ದ ಝಾಕಿರ್ ಜೊತೆಗೂಡಿ ಸೋಮವಾರ ಸಂಜೆ ಸ್ನಾನಕ್ಕೆಂದು ಇಚಿಲಂಪಾಡಿಯ  ಗುಂಡ್ಯ ಹೊಳೆಗೆ ತೆರಳಿದ್ದಾರೆ ಎನ್ನಲಾಗಿದೆ. ಇಚಿಲಂಪಾಡಿ ಸೇತುವೆಯ ಸಮೀಪ ನದಿಗೆ ಇಳಿದಿದ್ದು, ನೀರಿನಲ್ಲಿ ಮುಳುಗಿದ್ದಾರೆ. ಸಂಜೆ ವೇಳೆಗೆ ನದಿ ತಟದಲ್ಲಿ ಮೊಬೈಲ್ ರಿಂಗಣಿಸುವುದನ್ನು ಕೇಳಿದ ಸ್ಥಳೀಯರು ಸ್ಥಳಕ್ಕಾಗಮಿಸಿದಾಗ ಬೈಕ್ ಹಾಗೂ ಕಳಚಿಟ್ಟ ವಸ್ತ್ರ ಕಂಡುಬಂದಿದ್ದು, ಈ ವೇಳೆ ಜೋಬಿನ್, ಮೋಹನ್, ನವಾಝ್, ರೋಯಿ ಹಾಗೂ ರಿಜು ಎಂಬವರು ನೀರಿಗಿಳಿದು ಹುಡುಕಾಟ ನಡೆಸಿದ್ದಾರೆ.

ಈ ವೇಳೆ ಇಬ್ಬರ ಮೃತದೇಹ ದೊರೆತಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News