ಉಪ್ಪಿನಂಗಡಿ: ಬೈಕ್ ಗಳ ನಡುವೆ ಅಪಘಾತ: ಸವಾರ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

Update: 2021-04-19 17:54 GMT

ಉಪ್ಪಿನಂಗಡಿ: ಬೈಕ್ ಗಳೆರಡು ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರನೋರ್ವ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉರುವಾಲು ಪದವು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಬೈಕ್ ಗಳ  ಅಪಘಾತದಲ್ಲಿ ರಾಜೇಶ್ (30) ಎಂಬವರು ಮೃತಪಟ್ಟವರಾಗಿದ್ದು, ಅವರ ಸಹ ಸವಾರ ಪುರಂದರ ಹಾಗೂ ಇನ್ನೊಂದು ಬೈಕ್ ಚಲಾಯಿಸುತ್ತಿದ್ದ ಶಾಫಿ ಗಂಭೀರ ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಘಟನೆಯ ವಿವರ: ಕುಪ್ಪೆಟ್ಟಿ ಕಡೆಯಿಂದ ಬಂದಾರು ಕಡೆ ರಾಜೇಶ್ ಅವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಹಾಗೂ ಎದುರಿನಿಂದ ಶಾಫಿ ಅವರು ಚಲಾಯಿಸಿಕೊಂಡು ಬರುತ್ತಿದ್ದ ಶಾಫಿ ಎಂಬವರ ಬೈಕ್ ಉರುವಾಲು ಮಸೀದಿ ಸಮೀಪದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ರಾಜೇಶ್ ಚಲಾಯಿಸುತ್ತಿದ್ದ ಬೈಕ್ ನಲ್ಲಿ ಪುರಂದರ ಸಹಸವಾರನಾಗಿದ್ದರು. ಅಪಘಾತದ ರಭಸಕ್ಕೆ ಮೂವರೂ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಆಸ್ಪತ್ರೆ ತಲುಪುವಷ್ಟರಲ್ಲಿ ರಾಜೇಶ್ ಮೃತಪಟ್ಟಿದ್ದರು. ಪುರಂದರ ಅವರ ತಲೆಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಯಲ್ಲಿದ್ದಾರೆ.

18 ಕಿ.ಮೀ. ಅನ್ನು 12 ನಿಮಿಷದಲ್ಲಿ ಕ್ರಮಿಸಿದ ನೌಫಾಲ್: ಅಪಘಾತದ ಸಂದರ್ಭ "ಬಾಬಾ ಆ್ಯಂಬುಲೆನ್ಸ್ ನ ನೌಫಾಲ್" ಆಪತ್ಭಾಂದವನಾಗಿ ಬರುತ್ತಿದ್ದು, ಇಂದು ಕೂಡಾ ನೌಫಾಲ್ ಅಪಘಾತವಾದ ಎರಡು ನಿಮಿಷದಲ್ಲಿ ಸ್ಥಳದಲ್ಲಿದ್ದು, ಗಾಯಾಳುಗಳನ್ನು ಅಲ್ಲಿನ ದುರ್ಗಮ ರಸ್ತೆಯಲ್ಲಿ 18 ಕಿ.ಮೀ. ದೂರದ ಪುತ್ತೂರು ಆಸ್ಪತ್ರೆಗೆ ಕೇವಲ 12 ನಿಮಿಷದಲ್ಲಿ ತಲುಪಿಸಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ಶ್ಲಾಘನೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News