ಕೇಂದ್ರ ಸರಕಾರಕ್ಕೆ ವಾಸ್ತವ ಸ್ಥಿತಿ ಏಕೆ ಗೊತ್ತಾಗುತ್ತಿಲ್ಲ: ದಿಲ್ಲಿ ಹೈಕೋರ್ಟ್ ತರಾಟೆ

Update: 2021-04-21 16:22 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹಾಗೂ ದೇಶಾದ್ಯಂತ ಕೊರೋನ ವೈರಸ್ ನ ಎರಡನೇ ಅಲೆಯಿಂದಾಗಿ ಉಲ್ಬಣಿಸಿರುವ ಆಕ್ಸಿಜನ್ ಬಿಕ್ಕಟ್ಟನ್ನು ನಿಭಾಯಿಸಲು ವಿಫಲವಾಗಿರುವ ಕೇಂದ್ರ ಸರಕಾರವನ್ನು ಇಂದು ತರಾಟೆಗೆ ತೆಗೆದುಕೊಂಡಿರುವ ದಿಲ್ಲಿ ಹೈಕೋರ್ಟ್ ವಾಸ್ತವ ಸ್ಥಿತಿ ಏಕೆ ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದೆ.

ಆಕ್ಸಿಜನ್ ಬಿಕ್ಕಟ್ಟಿನಿಂದಾಗಿ ಕೋವಿಡ್-19 ಅಥವಾ ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಉಳಿಸಲು ಹಲವು ಆಸ್ಪತ್ರೆಗಳು ಪರದಾಡುತ್ತಿವೆ. ಆಕ್ಸಿಜನ್ ಸರಬರಾಜಿಗೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹೊಯ್ದಾಟ ನಡೆಸುತ್ತಿವೆ.

ತಾನು ನಿನ್ನೆ ನೀಡಿದ ಆದೇಶದ ಹೊರತಾಗಿಯೂ ಕೈಗಾರಿಕೆಗಳು ಆಕ್ಸಿಜನ್ ಬಳಕೆಗೆ ಅವಕಾಶ ನೀಡಿರುವ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, “ಇದೊಂದು ನಿಜವಾಗಿಯೂ ಹಾಸ್ಯಾಸ್ಪದ, ಜನರು ಸಾಯುತ್ತಿರುವಾಗ ನೀವು ಕೈಗಾರಿಕೆಗಳ ಬಗ್ಗೆ ಚಿಂತಿಸುತ್ತಿದ್ದೀರಿ. ಇದರ ಅರ್ಥ ಸರಕಾರಕ್ಕೆ ಜನರ ಜೀವ ಲೆಕ್ಕಕ್ಕಿಲ್ಲ” ಎಂದು ಹೇಳಿದರು.

ಅಮ್ಲಜನಕದ ಅವಶ್ಯಕತೆ ಹಲವು ಪಟ್ಟು ಹೆಚ್ಚಾಗಿದೆ. ಆಸ್ಪತ್ರೆಗಳಿಗೆ ಸಾಕಷ್ಟು ಆಮ್ಲಜನಕ ಪೂರೈಸುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಜೀವನದ ಮೂಲಭೂತ ಹಕ್ಕುಗಳ ರಕ್ಷಣೆಗೆ ನಾವು ನಿರ್ದೇಶನ ನೀಡುತ್ತೇವೆ. ನೆಲದ ವಾಸ್ತವತೆಯನ್ನು ಸರಕಾರ ಹೇಗೆ ಮರೆತು ಬಿಡುತ್ತದೆ. ಆಕ್ಸಿಜನ್ ಇಲ್ಲದೆ ಜನರು ಸಾಯಲು ಬಿಡಬಾರದು. ನೀವು ನಿಮ್ಮದೇ ಆದ ಸಮಯ ತೆಗೆದುಕೊಳ್ಳುತ್ತಿದ್ದೀರಿ. ಜನ ಸಾಯುತ್ತಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.

ದಿಲ್ಲಿಯ ಪ್ರಮುಖ ಮ್ಯಾಕ್ಸ್ ಆಸ್ಪತ್ರೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಅರ್ಜಿ ನಮಗೆ ಅಚ್ಚರಿ ತಂದಿದೆ ಎಂದು ಕೇಂದ್ರ ಸರಕಾರದ ಪರ ವಕೀಲರು ಹೇಳಿದಾಗ, ಈ ಅರ್ಜಿಯಿಂದ ಅಚ್ಚರಿ ಪಡಬೇಡಿ. ನೀವು ಪರಿಸ್ಥಿತಿಯನ್ನು ತಿಳಿದುಕೊಳ್ಳಬೇಕು… ನಾವು ನಿನ್ನೆ ಪೆಟ್ರೋಲಿಯಂ ಹಾಗೂ ಸ್ಟೀಲ್ ಕೈಗಾರಿಕೆಗಳ ಆಕ್ಸಿಜನ್ ಬಗ್ಗೆ ಹೇಳಿದ್ದೆವು. ಅದು ಏನಾಯಿತು? ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ಕಡತಗಳು ಓಡಾಡುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನ್ಯಾಯಾಲಯಕ್ಕೆ ತಿಳಿಸಿತು.  ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, “ನೀವು ಏನು ಮಾಡಿದ್ದೀರಿ? ಅದರ ಫಲಿತಾಂಶ ಏನಾಗಿದೆ? ನಾವು ಈ ಫೈಲ್ ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೈಗಾರಿಕೆಗಳು ಸಹಾಯ ಮಾಡಲು ಸಿದ್ಧವಾಗಿವೆ.  ಪೆಟ್ರೋಲಿಯಂ ಕಂಪೆನಿಗಳನ್ನು ನೀವೇ ನಡೆಸುತ್ತಿದ್ದೀರಿ.  ನಿಮ್ಮಲ್ಲಿ ವಾಯುಪಡೆಯಿದೆ. ನಾವು ನಿನ್ನೆ ಹಲವು ಆದೇಶಗಳನ್ನು ನೀಡಿದ್ದೆವು.  ಇಡೀ ದಿನ ಏನು ಮಾಡಿದ್ದೀರಿ?  ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News