ಕೋವಿಡ್-19 ಬಾಧಿತರ ಸಂಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ನಿರ್ಧಾರ
ಉಡುಪಿ, ಎ.26: ರಾಜ್ಯದಲ್ಲಿ ಕೋವಿಡ್-19 ಬಾಧಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲಿದ್ದು, ಇದರೊಂದಿಗೆ ಮೃತರ ಸಂಖ್ಯೆಯೂ ಹೆಚ್ಚಾ ಗುತ್ತಿದೆ. ಒಂದು ರಾಷ್ಟ್ರೀಯ ಪಕ್ಷ ವಾಗಿ ಜನರ ದು:ಖ ದುಮ್ಮಾನಗಳಿಗೆ ಸ್ಪಂದಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ನಮ್ಮ ಕರ್ತವ್ಯ ವಾಗಿದ್ದು, ಆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಜನಪರ ಕಾರ್ಯ ಯೋಜನೆಯೊಂದನ್ನು ಹಮ್ಮಿಕೊಳ್ಳಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಹೇಳಿದ್ದಾರೆ.
ಸೋಮವಾರ ನಾಯರ್ಕೆರೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಕೋವಿಡ್-19 ನಿರ್ವಹಣೆ ತುರ್ತು ಸಭೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತಾಡುತ್ತಿದ್ದರು.
ಕಾಂಗ್ರೆಸ್ನಿಂದ ಹೆಲ್ಫ್ಲೈನ್: ನಮ್ಮ ಜಿಲ್ಲೆ ಗ್ರಾಮೀಣ ಪರಿಸರವನ್ನು ಹೊಂದಿದ್ದು ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸುವ ನಿಟ್ಟಿನಲ್ಲಿ ರೆಮ್ಡಿಸಿವಿರ್ ಮಾತ್ರೆಗಳ ಪೂರೈಕೆ, ವ್ಯಾಕ್ಸಿನೇಶನ್ ಬಗ್ಗೆ ಜನರಿಗೆ ಸೂಕ್ತ ಸಕಾಲಿಕ ಮಾಹಿತಿ, ಅವಶ್ಯಕತೆಗೆ ಅನುಗುಣವಾಗಿ ರಕ್ತ ಮತ್ತು ಪ್ಲಾಸ್ಮಾ ನೀಡಿಕೆಯೇ ಮೊದಲಾದ ವ್ಯವಸ್ಥೆಯ ಬಗ್ಗೆ ಪಕ್ಷವು ತನ್ನದೇ ಆದ ಕೊರೋನಾ ವಾರಿಯರ್ಸ್ ಗಳನ್ನು ನೇಮಿಸಿ ಕ್ರಮ ಕೈಗೊಳ್ಳಲಿದೆ. ಹಾಗೆಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಸೂಚನೆಯಂತೆ ಹೆಲ್ಪ್ಲೈನ್ ವ್ಯವಸ್ಥೆಯನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆದಷ್ಟು ಶೀಘ್ರದಲ್ಲಿ ಮಾಡಲಾಗುವುದು ಎಂದು ಹೇಳಿದರು.
ಡಾ.ಸಂದೀಪ್ ಸನಿಲ್ ಮಾತನಾಡಿ ಪ್ರಚಲಿತ ಕೋವಿಡ್-19 ಸಮಸ್ಯೆಯ ಬಗ್ಗೆ ವಿಸ್ತಾರವಾಗಿ ಸಭೆಗೆ ತಿಳಿಸಿದರು. ಸಭೆಯಲ್ಲಿ, ಒಮ್ಮೆ ವ್ಯಾಕ್ಸಿನ್ ಹಾಕಿಸಿಕೊಂಡವರು ಎರಡನೇ ಬಾರಿಗೆ ವ್ಯಾಕ್ಸಿನ್ಗೆ ಬರಲು ಆರೋಗ್ಯಸೇತು ಆ್ಯಪ್ನಲ್ಲಿ ದಿನಾಂಕ ಸೂಚಿಸಿದ್ದರೂ ಸೆಂಟರಿನಲ್ಲಿ ವ್ಯಾಕ್ಸಿನ್ ಲಭ್ಯ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು. ಕುಂದಾಪುರದಲ್ಲಿ 120 ರೋಗಿಗಳಿಗೆ ಒಬ್ಬರೇ ವೈದ್ಯರು ಲಭ್ಯವಿದ್ದು ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯಬೇಕು. ಕೆಲವು ಆಸ್ಪತ್ರೆಗಳಲ್ಲಿ ಬೆಡ್ ಇದ್ದರೂ ಇಲ್ಲ ಎಂದು ರೋಗಿಗಳನ್ನು ಹಿಂದೆ ಕಳುಹಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಹಿರಿಯ ನಾಯಕರಾದ ವೆರೋನಿಕಾ ಕರ್ನೇಲಿಯೋ, ಉದ್ಯಾವರ ನಾಗೇಶ್ ಕುಮಾರ್, ಡಾ. ಸುನೀತಾ ಶೆಟ್ಟಿ, ಹರೀಶ ಶೆಟ್ಟಿ ಪಾಂಗಾಳ, ರಮೇಶ ಕಾಂಚನ್, ಕೃಷ್ಣಮೂರ್ತಿ ಅಚಾರ್ಯ, ಸೌರಭ್ ಬಲ್ಲಾಳ್, ದೀಪಕ್ ಕೋಟ್ಯಾನ್, ಬಾಲಕೃಷ್ಣ ಪೂಜಾರಿ, ರೋಶನಿ ಒಲಿವೇರಾ, ಚಂದ್ರಶೇಖರ ಶೆಟ್ಟಿ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸಂಕಪ್ಪಎ, ವಿಘ್ನೇಶ್ ಕಿಣಿ, ಚಂದ್ರಾವತಿ ಭಂಡಾರಿ, ಅಖಿಲೇಶ್, ರೋಶನ್ ಶೆಟ್ಟಿ, ಪ್ರಕಾಶ್, ಶೇಖರ್ ಕೆ. ಕೋಟ್ಯಾನ್, ಡೆರಿಕ್ ಡಿಸೋಜಾ, ಸಂಜಯ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ವಂದಿಸಿ, ಕಾರ್ಯದರ್ಶಿ ಕೀರ್ತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.