ಸರಕಾರದ ಬೇಜವಾಬ್ದಾರಿತನ ಸಾವು ನೋವಿಗೆ ಕಾರಣ: ಕಾಂಗ್ರೆಸ್ ವಕ್ತಾರ ಬಿಪಿನ್ಚಂದ್ರ ಪಾಲ್ ನಕ್ರೆ
ಉಡುಪಿ, ಎ.27: ದೇಶದಲ್ಲಿ ಕೊರೋನಾ ಮಹಾಮಾರಿ ಸಾಂಕ್ರಾಮಿಕತೆಯ ಆರ್ಭಟ ಮತ್ತು ಜನರ ಸಾವು ನೋವಿಗೆ ಆಡಳಿತಾರೂಢ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅವೈಜ್ಞಾನಿಕ ಕಾರ್ಯವೈಖರಿಯ ಬೇಜವಾಬ್ಧಾರಿ ನಿಲುವುಗಳೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಕೋವಿಡ್-19 ಎರಡನೇ ಅಲೆಯ ಭೀಕರತೆಯ ಬಗ್ಗೆ ತಜ್ಞರು ಸಾಕಷ್ಟು ಮುಂಚಿತ ವಾಗಿ ಮುನ್ನೆಚ್ಚರಿಕೆ ನೀಡಿದ್ದರೂ ಇದನ್ನು ಎದುರಿಸಲು ಸಮರ್ಪಕ ಪೂರ್ವತಯಾರಿ ಮಾಡದೇ ಇದ್ದದ್ದು, ಪರಿಣಾಮವಾಗಿ ಆಸ್ಪತ್ರೆ, ವೆಂಟಿಲೇಟರ್, ಆಕ್ಸಿಜನ್, ಪೂರಕ ಔಷಧಗಳ ಕೊರತೆಗೆ ಕಾರಣವಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿಯೇ ದೇಶದಲ್ಲಿ ಕೋವಿಡ್ ಲಸಿಕೆ ಲಭ್ಯವಿದ್ದರೂ ಅದನ್ನು ಸಕಾಲದಲ್ಲಿ ಜನರಿಗೆ ಕೊಡದೆ ಬೇರೆ ದೇಶಗಳಿಗೆ ಕೊಟ್ಟು ಇಂದು ಈ ಲಸಿಕೆಗಳ ಕೊರತೆಗೆ ಕಾರಣವಾಗಿದೆ ಎಂದವರು ದೂರಿದ್ದಾರೆ.
ಮತ್ತೊಂದೆಡೆ ಚುನಾವಣಾ ಆಯೋಗ ಹೊರಡಿಸಿದ್ದ ಪಂಚ ರಾಜ್ಯ ಹಾಗೂ ರಾಜ್ಯ ಉಪಚುನಾವಣೆಯ ಆದೇಶವನ್ನ, ಕೋವಿಡ್-19 ಸಾಂಕ್ರಾಮಿಕತೆಯ ತುರ್ತು ಸ್ಥಿತಿಯನ್ನು ಮುಂದಿಟ್ಟು ಮುಂದೂಡಬಹುದಾದ ಎಲ್ಲಾ ಅವಕಾಶವಿದ್ದರೂ ಸರಕಾರ ಚುನಾವಣೆಗಳನ್ನು ನಡೆಸಿದ್ದು ಇಂದಿನ ಈ ದುಸ್ಥಿತಿಗೆ ಕಾರಣವಾಗಿದೆ. ಜನರ ಜೀವ ಉಳಿಸಲು ತುರ್ತು ಆಸ್ಪತ್ರೆಗಳನ್ನು ನಿರ್ಮಿಸಬೇಕಾಗಿದ್ದ ಸರಕಾರವೊಂದಕ್ಕೆ ಶವಗಳ ಸಂಸ್ಕಾರಕ್ಕಾಗಿ ತುರ್ತು ಸ್ಮಶಾನಗಳನ್ನು ನಿರ್ಮಿಸಬೇಕಾದ ಅನಿವಾರ್ಯತೆ ಬಂದದ್ದು ಆಡಳಿತಾರೂಡರ ಆಡಳಿತ ವೈಪಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.