ಅಧಿಕಾರಿಗಳು ಪೊಲೀಸರೊಂದಿಗೆ ಸಂಪರ್ಕದಲ್ಲಿರಿ: ಶಾಸಕ ಮಠಂದೂರು

Update: 2021-04-27 12:44 GMT

ಪುತ್ತೂರು: ಕೋವಿಡ್ ಕರ್ಫ್ಯೂ ಸಂದರ್ಭದಲ್ಲಿ ಸಮಪರ್ಕವಾದ ಕಾನೂನು ಪಾಲನೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಪೊಲೀಸರೊಂದಿಗೆ ನಿಕಟ ಸಂಪರ್ಕದಲ್ಲಿರಿ, ಬೆಳಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳಿಗೆ ಬರುವ ಜನರಲ್ಲಿ ಮಾಹಿತಿ ಪಡೆದು ವಿನಾಯಿತಿ ತೋರಿಸಿ ಎಂದು ಶಾಸಕ ಸಂಜೀವ ಮಠಂದೂರು ಸೂಚನೆ ನೀಡಿದರು. 

ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಪುತ್ತೂರು ನಗರಸಭೆಯಲ್ಲಿ ಮಂಗಳವಾರ ಸಂಜೆ ಕೋವಿಡ್  ಕಫ್ರ್ಯೂ ಸಂದರ್ಭದಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಯಿತು. 

ಸಭೆಯಲ್ಲಿ ಅಧಿಕಾರಿಗಳಿಗೆ ತುರ್ತು ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಶಾಸಕ ಸಂಜೀವ ಮಠಂದೂರು ಅವರು ಮುಂದಿನ ಎರಡು ವಾರಗಳ ಕಾಲ ನೂರಕ್ಕೆ ನೂರು ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಗರಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ಅಧಿಕಾರಿಗಳು ಪೊಲೀಸರೊಂದಿಗೆ ಸಂಪರ್ಕದಲ್ಲಿರಬೇಕು. ಹಾಗಂತ ಅನಗತ್ಯವಾಗಿ ಬರುವವರ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಳ್ಳಬೇಕಾಗಿದೆ. ಅಗತ್ಯಕ್ಕಾಗಿ ಅಗಮಿಸುವವರಿಗೆ ಮುಖ್ಯವಾಗಿ ನಗರಕ್ಕೆ ವ್ಯಾಕ್ಸಿನೇಶನ್‍ಗೆ ಬರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಗರಸಭೆಯ ಎಲ್ಲಾ ಸದಸ್ಯರು ಪೂರಕ ಸ್ಪಂದನೆ ನೀಡಬೇಕಾಗಿದೆ. ಬೇರೆ ರಾಜ್ಯಗಳಿಂದ, ಹೊರದೇಶಗಳಿಂದ, ರಾಜಧಾನಿ ಬೆಂಗಳೂರಿನಿಂದ ಆಗಮಿಸುವವರ ಕುರಿತು ವಾರ್ಡ್ ಸದಸ್ಯರು, ಆಶಾ ಕಾರ್ಯಕರ್ತೆಯರು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು ಮತ್ತು ನಿಗಾ ವಹಿಸಬೇಕು. 

ಹೋಂ ಕ್ವಾರಂಟೈನ್‍ಗೆ ಒಳಪಡುವವರಿಗೆ ಓಷಧಿ, ಆಹಾರ ಸಾಮಾಗ್ರಿಗಳು, ಇನ್ನಿತರ ಅಗತ್ಯ ವಸ್ತುಗಳನ್ನು ತಲುಪಿಸುವಲ್ಲಿ ಸಹಕರಿಸಬೇಕು. ಈಗಾಗಲೇ ನಿಗದಿಯಾಗಿದ್ದ ಮದುವೆ ಇನ್ನಿತರ ಶುಭ ಕಾರ್ಯಗಳಿಗೆ ಸೀಮಿತ ಜನರು ಆಗಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. 

ಕೊರೋನ ನಡುವೆ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ ಜಾಸ್ತಿಯಾಗುತ್ತಿದ್ದು, ರಕ್ತದ ಕೊರತೆ ಉಂಟಾಗಿದೆ. ಆದ್ದರಿಂದ ರಕ್ತದಾನ ಮಾಡುವವರು ಮೊದಲೇ ತಮ್ಮ ಹೆಸರನ್ನು ನೊ0ಂದಾಯಿಸಿ ರಕ್ತ ನೀಡಬಹುದು. ರಕ್ತದಾನ ಮಾಡುವವರು ವ್ಯಾಕ್ಸಿನೇಶನ್ ಪಡೆಯಲು ಸ್ವಲ್ಪ ಸಮಯ ಕಾಯಬಹುದು ಎಂದು ಶಾಸಕರು ತಿಳಿಸಿದರು. ಒಟ್ಟಾರೆಯಾಗಿ ಪುತ್ತೂರು ನಗರವನ್ನು ಕೇಂದ್ರಿಕೃತವಾಗಿರಿಸಿ ಜನರ ಆರೋಗ್ಯ, ಜೀವರಕ್ಷಣೆ ಅಧಿಕಾರಿಗಳು, ಜನಪ್ರತಿನಿಧಿನಿಗಳು, ನಗರಸಭೆಯ ಮೇಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಮಾತನಾಡಿ, ಈಗಾಗಲೇ ಸರಕಾರ ಕಠಿಣ ನಿಯಮಾವಳಿಯನ್ನು ವೀಕೆಂಡ್ ಕಫ್ರ್ಯೂ ಬಳಿಕ ಇದೀಗ 14 ದಿನಗಳ ಕಾಲ ವಿಸ್ತರಣೆ ಮಾಡಿದೆ. ಬೆಳಗ್ಗೆ 6 ರಿಂದ 10 ಗಂಟೆಯ ತನಕ ಸಾರ್ವಜನಿಕರಿಗೆ ಓಡಾಡಲು ಅವಕಾಶವಿದ್ದು, 10 ಗಂಟೆಯ ನಂತರ ಓಡಾಟಕ್ಕೆ ಅವಕಾಶವಿಲ್ಲ. ಕೇವಲ ಝೀರೋ ಟ್ರಾಫಿಕ್ ಇರಬೇಕು. ಹೊಟೇಲ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶವಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದರೆ ಡೆಲಿವರಿ ಬಾಯ್ ಮೂಲಕ ಮನೆಗಳಿಗೆ, ಇನ್ನಿತರ ಕಡೆಗಳಿಗೆ ತಲುಪಿಸಬಹುದು. ಕೃಷಿ ಚಟುವಟಿಕೆಗಳಿಗೆ, ಕನ್‍ಸ್ಟ್ರಕ್ಷನ್ ಕೆಲಸಗಳಿಗೆ ಸಂಘಟಿತ ಕಾರ್ಮಿಕರಿಗೆ ಈಗಾಗಲೇ ನೀಡಲಾಗಿರುವ ಪಾಸ್ ಬಳಸಬಹುದು. ಅಸಂಘಟಿತ ಕಾರ್ಮಿಕರಿದ್ದರೆ ಯಾರು ಕೆಲಸ ವಹಿಸುತ್ತಾರೋ ಅವರು ಕೆಲಸದ ಸ್ಥಗಳಿಗೆ ಅವರನ್ನು ಬಿಟ್ಟುವ ಬರುವ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ನಗರಸಭೆ ವತಿಯಿಂದ ಸೇವಾ ಕಮಿಟಿಯನ್ನು ತೆರೆಯಲಾಗಿದ್ದು, ಪ್ರತಿಯೊಂದಕ್ಕೂ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದ ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅವರು ನೋಡೆಲ್ ಅಧಿಕಾರಿಗಳ ಹೆಸರನ್ನು ಸಭೆಯಲ್ಲಿ ತಿಳಿಸಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಟಿ.ರಮೇಶ್ ಬಾಬು, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News