ಭಾರತದಂತಹ ಸ್ಥಳಗಳಲ್ಲಿ ಚುನಾವಣೆ ತಡೆಯಲು ಸಾಧ್ಯವಿಲ್ಲ: ಜೈಶಂಕರ್

Update: 2021-05-05 18:34 GMT

ಹೊಸದಿಲ್ಲಿ, ಮೇ 5: ಭಾರತದಂತಹ ಪ್ರಜಾತಂತ್ರವಾದಿ ದೇಶಗಳಲ್ಲಿ ಚುನಾವಣೆಗಳನ್ನು ತಡೆಯಲು ಸಾಧ್ಯವಾಗದು ಎಂದು ವಿದೇಶ ವ್ಯವಹಾರ ಇಲಾಖೆಯ ಸಚಿವ ಎಸ್. ಜೈಶಂಕರ್ ಬುಧವಾರ ಹೇಳಿದ್ದಾರೆ.

ಕೊರೋನ ಸೋಂಕಿನ ಸುತ್ತಮುತ್ತಲಿನ ರಾಜಕೀಯ ಮತ್ತು ಮಾಧ್ಯಮಗಳ ವಿಮರ್ಶಾತ್ಮಕ ವರದಿಗಾರಿಕೆ ಅಂತ್ಯವಾಗಬೇಕು ಎಂದು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಭಾರತದಂತಹ ದೇಶದಲ್ಲಿ ಚುನಾವಣೆ ತಡೆಯಲು ಸಾಧ್ಯವಿಲ್ಲ. ನಾನು ಚಿಕ್ಕವನಿದ್ದಾಗ ಒಮ್ಮೆ ದೇಶದಲ್ಲಿ ಚುನಾವಣೆಯನ್ನು ತಡೆಯಲಾಗಿತ್ತು. ಅದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು 1975ರಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿರುವುದನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು. ಕೊರೋನ ಸೋಂಕಿನ ವಿರುದ್ಧ ಕ್ರಮಕೈಗೊಳ್ಳುವ ಬದಲು ಬಿಜೆಪಿ ಚುನಾವಣೆಗೆ ಆದ್ಯತೆ ನೀಡಿತ್ತು ಎಂಬ ಟೀಕೆಯನ್ನು ತಳ್ಳಿಹಾಕಿದ ಅವರು ‘ಆ ಪಕ್ಷದ ನಾಯಕರು ನಡೆಸಿದ ರ್ಯಾಲಿಯಲ್ಲಿ ಸೇರಿದ್ದ ಬೃಹತ್ ಜನಸ್ತೋಮದಿಂದ ಸೋಂಕು ಹರಡಿದೆ. ಆ ನಾಯಕರು ಮಾಸ್ಕ್ ಧರಿಸಿರಲಿಲ್ಲ’ ಎಂದು ಇನ್ನೊಂದು ಪಕ್ಷದವರು ದೂರಬಹುದು. ಹೀಗೆ ಪರಸ್ಪರ ದೂರು ವಿನಿಮಯ ಮಾಡಿಕೊಳ್ಳಬಹುದು ಎಂದುತ್ತರಿಸಿದರು.

ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಉಲ್ಬಣಗೊಂಡ ಸಂದರ್ಭದಲ್ಲೇ ಕೊರೋನ ಲಸಿಕೆಯನ್ನು ರಫ್ತು ಮಾಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೊರೋನ ಸೋಂಕು ಜಾಗತಿಕ ಸಮಸ್ಯೆಯಾಗಿದೆ. ಇವತ್ತು ನಮಗೆ, ನಾಳೆ ಮತ್ತೊಬ್ಬರಿಗೆ ಈ ಸಮಸ್ಯೆ ಕಾಡಬಹುದು. ಇವತ್ತು ನಾವು ವಿಶ್ವಕ್ಕೆ ನೆರವಾದರೆ ನಾಳೆ ನಮಗೆ ವಿಶ್ವದ ನೆರವು ದೊರಕುತ್ತದೆ ಎಂದರು.

ಕೊರೋನ ಸೋಂಕಿನ ಬಿಕ್ಕಟ್ಟು ಎದುರಿಸಲು ಭಾರತಕ್ಕೆ ವಿಶ್ವದ ರಾಷ್ಟ್ರಗಳು ನೆರವು ನೀಡಿದೆ ಎಂದು ವಿಶ್ಲೇಷಿಸುವುದು ಸರಿಯಲ್ಲ. ಇದು ಮಿತೃತ್ವ ಅಥವಾ ಸ್ನೇಹಪರತೆಯಿಂದ ನೀಡುವ ಬೆಂಬಲವಾಗಿದೆ ಎಂದು ಜೈಶಂಕರ್ ಹೇಳಿದರು. ಸಮಸ್ಯೆಯನ್ನು ವಿಶ್ಲೇಷಿಸುವಾಗ ಸಾರ್ವಜನಿಕರ ಆರೋಗ್ಯಕ್ಕೆ ಮಹತ್ವ ನೀಡಬೇಕು. ಕೆಲವು ಮಾಧ್ಯಮಗಳ ಸಂಪಾದಕೀಯ ಬರಹ ತುಂಬಾ ತೀಕ್ಷ್ಣವಾಗಿರುತ್ತದೆ. ಕಾಲ್ಪನಿಕ ಕತೆ, ಕಾದಂಬರಿ ಬರೆಯುವವರು ಸುದ್ಧಿಗಳನ್ನು ವಿಶ್ಲೇಷಿಸುವುದನ್ನೂ ಗಮನಿಸಿದ್ದೇನೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News