ಕಾರ್ಕಳ ತಾ.ಪಂ. ನಲ್ಲಿ ಕೋವಿಡ್ ನಿಯಂತ್ರಣ ಕುರಿತು ಸಭೆ
ಕಾರ್ಕಳ : ಕಾರ್ಕಳ ಹಾಗೂ ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ತೆರೆದು, ಹೆಲ್ಪ್ ಡೆಸ್ಕ್ನಲ್ಲಿ ತಲಾ ಒಂದರಂತೆ ಸ್ಟಾಫ್ ನರ್ಸ್, ಶಿಕ್ಷಣ ಇಲಾಖೆ ಸಿಬ್ಬಂದಿ, ಸ್ವಯಂ ಸೇವಕರನ್ನು ನಿಯೋಜಿಸಿ, ಬಂದಂತಹ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗುರುವಾರ ಕಾರ್ಕಳ ತಾ.ಪಂ.ನಲ್ಲಿ ಕೋವಿಡ್ ನಿಯಂತ್ರಣ ಕುರಿತು ನಡೆದ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸರಕಾರಿ ಆಸ್ಪತ್ರೆಯಲ್ಲಿ ಕೆಲವೊಂದು ಸಂದರ್ಭ ರೋಗಿಗಳಿಗೆ ಸಮರ್ಪಕ ಸ್ಪಂದನೆ ದೊರೆಯದ ಕುರಿತು ದೂರುಗಳಿವೆ ಎಂದರು.
ಈ ವೇಳೆ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಕೋವಿಡ್ ಸಂದರ್ಭ ಆರೋಗ್ಯ ಇಲಾಖಾ ಸಿಬ್ಬಂದಿ ಶಕ್ತಿ ಮೀರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ಕೆಲವೊಂದು ಸಣ್ಣಪುಟ್ಟ ಲೋಪ ಉಂಟಾಗುವುದು ಸಹಜ. ಆಸ್ಪತ್ರೆಗೆ ಬರುವ ರೋಗಿಗಳನ್ನು ವಿಚಾರಿಸಲು ಹೆಲ್ಪ್ ಡೆಸ್ಕ್ ತೆರೆದು, ಮೂರು ಹಾಸಿಗೆಯ ತುರ್ತು ಕೊಠಡಿ ತೆರೆದು, ರೋಗಿಗಳನ್ನು ಅಲ್ಲಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಒದಗಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಹಾಗೂ ಡಾ. ಸಂತೋಷ್ ಅವರಿಗೆ ಶಾಸಕರು ಸೂಚಿಸಿದರು.
ವ್ಯಾಕ್ಸಿನೇಷನ್, ಕ್ವಾರಂಟೈನ್ ಸಿಸ್ಟಮ್, ಕಂಟೈನ್ ಮೆಂಟ್ ಝೋನ್ ನಿರ್ಮಾಣ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ ಮಾಹಿತಿ ಪಡೆದರು. ಹೊರ ಜಿಲ್ಲೆ, ಹೊರ ರಾಜ್ಯದಿಂದ ಆಗಮಿಸುವವರ ಮೇಲೂ ನಿಗಾ ವಹಿಸುವಂತೆ ಸಂಸದೆ ಸೂಚನೆ ನೀಡಿದರು.