ಅನಗತ್ಯವಾಗಿ ಓಡಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು: ಸಂಸದೆ ಶೋಭಾ

Update: 2021-05-06 17:35 GMT

ಕಾಪು (ಪಡುಬಿದ್ರಿ): ಹೊರಜಿಲ್ಲೆಗಳಿಂದ ಬರುವ ಮತ್ತು ಅನಗತ್ಯವಾಗಿ ಓಡಾಡುವವರ ವಿರುದ್ಧ  ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಕಾಫು ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವಲ್ಲಿ ಪೊಲಿಸರು ಕ್ರಮವಹಿಸಬೇಕಾಗಿ ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು.

ಗುರುವಾರ ಕಾಪುವಿನ ಪುರಸಭಾ ಸಭಾಂಗಣದಲ್ಲಿ ಕೋವಿಡ್ -19  ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಸಂಸದೆ ಶೋಭಾ ಕರಂದ್ಲಾಜೆ ರವರು  ಕೋವಿಡ್  ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ  ನಡೆಸಿದರು.

ಕಾಪು ತಾಲೂಕು ವ್ಯಾಪ್ತಿಯಲ್ಲಿ 4 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 1 ಸಮುದಾಯ ಆರೋಗ್ಯ ಕೇಂದ್ರ ಇರುತ್ತದೆ. 2 ಖಾಸಗಿ ಆಸ್ಪತ್ರೆ ಗಳಿದ್ದು ಪ್ರಶಾಂತ್ ನರ್ಸಿಂಗ್ ಹೋಮ್  ಕೊಪ್ಪಲಂಗಡಿ ಇಲ್ಲಿ 25 ಜನರಲ್ ಬೆಡ್ ಮತ್ತು ಸಿದ್ದಿವಿನಾಯಕ ಆಸ್ಪತ್ರೆ ಪಡುಬಿದ್ರಿ ಇಲ್ಲಿ 10 ಜನರಲ್ ಬೆಡ್ ಗಳಿವೆ. ತಾಲೂಕಿನಲ್ಲಿ 16 ಗ್ರಾಮ ಪಂಚಾಯಿತಿಗಳಿದ್ದು, ಗ್ರಾಮ ಪಂಚಾಯತ್ ಹಂತದಲ್ಲಿ ಒಂದೊಂದು ಟಾಸ್ಕ್ ಫೋರ್ಸ್ ರಚನೆಯಾಗಿದೆ.  ಪ್ರತಿಯೊಂದು ಟಾಸ್ಕ್ ಫೋರ್ಸ್‍ಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐಸೊಲೇಟ್ ಆಗಿರುವ ಪಾಸಿಟಿವ್ ಇರುವ ರೋಗಿಗಳ ಆರೋಗ್ಯದ ಸ್ಥಿತಿಗತಿಯನ್ನು ಪರಿಶೀಲಿಸಿ ನೋಡಲ್ ಅಧಿಕಾರಿಯವರಿಗೆ ವರದಿ ನೀಡಲಾಗಿದ ಎಂದು ಅಧಿಕಾರಿಗಳು ವಿವರ ನೀಡಿದರು.

ಸೋಡಲ್ ಅಧಿಕಾರಿಯವರು ವರದಿ ಕ್ರೋಢೀಕರಿಸಿಕೊಂಡು ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಚರ್ಚಿಸಿ ರೋಗ ಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗೆ ಸಾಗಿಸುವ ಕಾರ್ಯ ತುರ್ತಾಗಿ ನಡೆಯುತ್ತಿದೆ ಎಂದು ತಹಶೀಲ್ದಾರ್ ಸಂಸದರಿಗೆ ಮಾಹಿತಿ ನೀಡಿದರು. ಹೋಂ ಐಸೊಲೇಷನ್ ಮತ್ತು ಹೋಂಕ್ವಾರೆಂಟೈನ್ ಆಗಿರುವ ಪ್ರತಿಯೊಬ್ಬ ವ್ಯಕ್ತಿಗಳ ಆರೋಗ್ಯದ ಸ್ಥಿತಿಗತಿ ಪರಿಶೀಲಿಸಿ ಯಾವುದೇ ಅಚಾತುರ್ಯ ಆಗದಂತೆ ಕ್ರಮಕೈಗೊಳ್ಳಲು ಶೋಭಾ ಕರಂದ್ಲಾಜೆ ಸೂಚಿಸಿದರು. 

ಕಾಫು ತಾಲೂಕು ವ್ಯಾಪ್ತಿಯಲ್ಲಿ 12490 ಜನರಿಗೆ ಲಸಿಕೆ ನೀಡಲಾಗಿದ್ದು ಲಸಿಕೆ ಪೂರೈಕೆಗೆ ಅನುಗುಣವಾಗಿ ಆದ್ಯತೆಯ ಮೇರೆಗೆ ಲಸಿಕೆ ಹಾಕಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿಯವರು ತಿಳಿಸಿದರು.ಪಶುವೈದ್ಯಾಧಿಕಾರಿಯವರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ  ಆದ್ಯತೆ ಮೇರೆಗೆ ಲಸಿಕೆ ನೀಡಬೇಕೆಂದು ಮಾನ್ಯ ಸಂಸದರು ಸೂಚಿಸಿದರು.

ಸಭೆಯಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಲ್ಲಾ ಪಂಚಾಯತ್ ಉಪಾದ್ಯಕ್ಷೆ ಶೀಲಾ ಕೆ ಶೆಟ್ಟಿ, ಕಾಫು ಪುರಸಭೆ ಅಧ್ಯಕ್ಷರು ಅನಿಲ್ ಕುಮಾರ್ ಉಪಾಧ್ಯಕ್ಷ ಮಾಲಿನಿ,ಜಿಲ್ಲಾ ಪಂಚಾಯತ್ ಸದಸ್ಯ ರಾದ ಗೀತಾಂಜಲಿ ಎಂ ಸುವರ್ಣ, ಶಿಲ್ಪಾ ಜಿ. ಸುವರ್ಣ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ, ಕಾಪು ತಹಶೀಲ್ದಾರ್ ಪ್ರತಿಭಾ ಆರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ಕರ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ತಾಲೂಕು ಮಟ್ಟಡ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಡಿಕೆ

30000 ಜನಸಂಖ್ಯೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಜನಸಂಖ್ಯೆ ಹೆಚ್ಚಿರುವುದರಿಂದ ಹೆಚ್ಚುವರಿಯಾಗಿ 2 ಪ್ರಾಥಮಿಕ ಕೇಂದ್ರ ಸ್ಥಾಪಿಸುವ ತುರ್ತು ಅವಶ್ಯಕತೆ ಇದೆಯೆಂದು ತಾಲೂಕು ಆರೋಗ್ಯಾಧಿಕಾರಿಗಳು ಸಂಸದರಲ್ಲಿ ಬೇಡಿಕೆ ಇಟ್ಟರು. ಶೀಘ್ರದಲ್ಲಿ ಕಾಪು ತಾಲೂಕು ವ್ಯಾಪ್ತಿಯಲ್ಲಿ ತಾಲೂಕು ಮಟ್ಟದಲ್ಲಿ ಆಸ್ಪತ್ರೆ ಮತ್ತು 2 ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲು  ಕ್ರಮವಹಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News