ತೌಕ್ತೆ ಚಂಡಮಾರುತದಿಂದ ಉಡುಪಿ ಜಿಲ್ಲೆಯಾದ್ಯಂತ ಸಮುದ್ರ ಪ್ರಕ್ಷುಬ್ದ
ಉಡುಪಿ, ಮೇ 15: ತೌಕ್ತೆ ಚಂಡಮಾರುತ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಯಾದ್ಯಂತ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ತೀರದ ಜನತೆ ತತ್ತರಿಸಿ ಹೋಗಿದ್ದಾರೆ. ಶನಿವಾರ ಬೆಳಗ್ಗೆಯಿಂದ ಕಡಲಿನ ಅಬ್ಬರ ಕ್ಷಣಕ್ಷಣವೂ ತೀವ್ರ ಸ್ವರೂಪ ಪಡೆ ಯುತ್ತಿದ್ದು, ಹಲವು ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನೂರಾರು ಕುಟುಂಬಗಳನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯ ಪ್ರವೃತವಾಗಿದೆ.
ಜಿಲ್ಲೆಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಹಲವು ಕಡೆಗಳಲ್ಲಿ ಕಡಲ್ಕೊರೆತ ಉಂಟಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ ನಾಲ್ಕು, ಬೈಂದೂರು ತಾಲೂಕಿನಲ್ಲಿ ಮೂರು ಮನೆಗಳಿಗೆ ಹಾಗೂ ಐದು ತಾತ್ಕಾಲಿಕ ಶೆಡ್ಗಳಿಗೆ ಮತ್ತು ಉಡುಪಿ ತಾಲೂಕಿನಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ. ಕಾಪು ತಾಲೂಕಿನಲ್ಲಿ ವಿದ್ಯುತ್ ತಂತಿ ಗಾಳಿಗೆ ಬಿದಿದ್ದು, ಇದನ್ನು ತುಳಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮಲ್ಪೆ ಪಡುಕೆರೆಯಲ್ಲಿ ಆತಂಕ
ಜಿಲ್ಲೆಯಲ್ಲಿ ಸುಮಾರು 50 ತೆಂಗಿನಮರಗಳಿಗೆ ಹಾನಿಯಾಗಿದ್ದು, ಮರಗಳು ಧರೆಗೆ ಉರುಳಿರುವುದರಿಂದ ಅಲ್ಲಲ್ಲಿ ರಸ್ತೆ ಬಂದ್ ಆಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗಿದೆ. ಮಲ್ಪೆ ಪಡುಕೆರೆ, ಕೋಟ ಪಡುಕೆರೆ, ಕಾಪು, ಎರ್ಮಾಳ್ ಬಡಾ, ಪಡುಬಿದ್ರಿ, ಶಿರೂರು, ಮರವಂತೆ ಸೇರಿದಂತೆ ಹಲವು ಕಡೆಗಳಲ್ಲಿ ಭೂ ಪ್ರದೇಶವನ್ನು ಸಮುದ್ರ ಆವರಿಸುತ್ತಿದ್ದು, ಇದರಿಂದ ತೀದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಮಲ್ಪೆ ಪಡುಕೆರೆಯಲ್ಲಿ ಕಾಂಕ್ರಿಟ್ ರಸ್ತೆಯವರೆಗೂ ಸಮುದ್ರ ವಿಸ್ತಾರ ಗೊಂಡಿದ್ದು, ಸುಮಾರು 300 ಮನೆಗಳು ಅಪಾಯದಲ್ಲಿದೆ. ಸ್ಥಳಕ್ಕೆ ಉಡುಪಿ ಶಾಸಕ ಕೆ.ರಘುಪತಿ ಭಟ್, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಪೌರಾಯುಕ್ತರು, ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಲ್ಲಿನ ಹಲವು ಮನೆಗಳಿಗೆ ಸಮುದ್ರ ನೀರು ಅಂಗಳದವರೆಗೆ ಬಂದಿದ್ದು, ಆತಂಕದ ಪರಿಸ್ಥಿತಿ ಎದುರಾಗಿದೆ. ನೂರಾರು ಕುಟುಂಬಗಳನ್ನು ಮನವೊಲಿಸಿ ಮಲ್ಪೆಯ ಏಳೂರು ಮೊಗವೀರ ಸಭಾಭವನ ಮತ್ತು ನಾರಾಯಣಗುರು ಸಭಾಭವನಗಳಲ್ಲಿ ಸ್ಥಾಪಿಸಲಾದ ಪುನರ್ ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕಾಗಿ ಸ್ಥಳದಲ್ಲಿ ಎರಡು ಕೆಎಸ್ಆರ್ಟಿಸಿ ಬಸ್ಗಳನ್ನು ಇರಿಸಲಾಗಿದೆ.
ಬೀಚ್ಗಳಿಗೆ ಅಪಾರ ಹಾನಿ
ಸಮುದ್ರ ನೀರು ಮಲ್ಪೆ, ಪಡುಬಿದ್ರಿ ಹಾಗೂ ಕಾಪು ಬೀಚ್ಗಳಿಗೆ ನುಗ್ಗಿದ ಪರಿಣಾಮ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಭಾರೀ ಹಾನಿ ಉಂಟಾಗಿದೆ. ಕಾಪು ಬೀಚ್ನ ಸುತ್ತಲಿನ 30ಕ್ಕೂ ಅಧಿಕ ಮನೆಗಳಿಗೆ ನಿೀರು ನುಗ್ಗಿರುವುದಾಗಿ ತಿಳಿದುಬಂದಿದೆ.
ಪಡುಬಿದ್ರೆ ನಡಿಪಟ್ನ ಎಂಬಲ್ಲಿ ರಸ್ತೆಗೆ ಅಲೆಗಳು ಅಪ್ಪಳಿಸುತ್ತಿದ್ದು, ರಸ್ತೆ ಅಪಾಯ ದಲ್ಲಿದೆ. ಎರ್ಮಾಳ್ ಬಡಾ ಗ್ರಾಮದಲ್ಲಿ ತೀರದ ತೋಟಕ್ಕೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯ ಬಾಳಿಗೆರ ಹಾಗೂ ಪಡುಕುದ್ರು ಜಲಾವೃತ ಗೊಂಡಿದ್ದು, ನೂರಾರು ಮನೆಗಳಿಗೆ ನೀರು ನುಗ್ಗುವ ಅಪಾಯ ಎದುರಾಗಿದೆ.
ಅಗತ್ಯ ಬಿದ್ದರೆ ಇಲ್ಲಿನ ಕುಟುಂಬಗಳನ್ನು ಹೂಡೆಯ ಸಾಲಿಹಾತ್ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆ ಗ್ರಾಪಂ ಯೋಜನೆ ಹಾಕಿಕೊಂಡಿದೆ. ಅದೇ ರೀತಿ ತಡೆಗೋಡೆ ಇಲ್ಲದ ಇಲ್ಲಿನ ಗುಜ್ಜರಬೆಟ್ಟುವಿನಲ್ಲಿ ಕಡಲ್ಕೊರೆತ ಆರಂಭಗೊಂಡಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೃಷಿ, ಬಾವಿಗಳಿಗೆ ಹಾನಿ
ಭಾರೀ ಮಳೆಗೆ ಗಂಗೊಳ್ಳಿಯ ಸಂತಯ್ಯನಕೇರಿಯ ಗೋವಿಂದ ಪೂಜಾರಿ ಎಂಬವರ ಕೃಷಿ ಭೂಮಿಗೆ ಸಮುದ್ರದ ಉಪ್ಪು ನೀರು ನುಗ್ಗಿ ಸೌತೆ ಕಾಯಿ ಹಾಗೂ ಕಲ್ಲಂಗಡಿ ಹಣ್ಣುಗಳಿಗೆ ಅಪಾಯ ಹಾನಿಯಾಗಿದೆ. ಅದೇ ರೀತಿ ಇದೇ ಪ್ರದೇಶದ ಸುಮಾರು 20 ಮನೆಗಳ ಬಾವಿಗೆ ಉಪ್ಪು ನೀರು ನುಗ್ಗಿರುವ ಬಗ್ಗೆ ತಿಳಿದು ಬಂದಿದೆ.
ಜಿಲ್ಲೆಯಾದ್ಯಂತ ಗಾಳಿಮಳೆಗೆ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಧರೆಗೆ ಉರುಳಿದ್ದು, ಟ್ರಾನ್ಸ್ ಫಾರ್ಮರ್ಗಳಿಗೆ ಹಾನಿಯಾಗಿವೆ. ಇದರಿಂದ ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಯಾ ತಾಲೂಕುಗಳ ತಹಶೀಲ್ದಾರ್ ತಮ್ಮ ಪ್ರದೇಶದಲ್ಲಿ ಹಾನಿ ಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಲ್ಪೆ ನಾಡದೋಣಿಗಳು ಸುರಕ್ಷಿತ ಸ್ಥಳಕ್ಕೆ
ಮಲ್ಪೆ ಬೀಚ್ ಉದ್ದಕ್ಕೂ ಸಮುದ್ರ ಕೊರೆತ ಕಾಣಿಸಿಕೊಂಡಿದ್ದು, ಸುಮಾರು 25ರಿಂದ 30ರಷ್ಟು ಭೂಭಾಗ ಕೊರೆತ ಸಂಭವಿಸಿದೆ. ಮಲ್ಪೆ ಬಂದರು ಸಮೀಪದ ಹನುಮಾನ್ನಗರದಿಂದ, ಕೊಳ, ಬೀಚ್, ತೊಟ್ಟಂವರೆಗೆ ಕೊರೆತ ಉಂಟಾಗಿದೆ. ಮಲ್ಪೆ ಹಾಗೂ ಪಡುಕೆರೆಯ ಸಮುದ್ರತೀರದಲ್ಲಿ ಇರಿಸಲಾದ ಹತ್ತಾರು ನಾಡ ದೋಣಿಗಳನ್ನು ಕ್ರೇನ್ ಮೂಲಕ ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.
ಮಲ್ಪೆ ಬೀಚ್ ಭಾಗದಲ್ಲಿ ವಿಹಾರಾರ್ಥಿಗಳು ಕುಳಿತುಕೊಳ್ಳುವ ಸ್ಥಳಕ್ಕೆ ಸಮುದ್ರದ ನೀರು ನುಗ್ಗಿದ್ದು, ಬೀಚ್ನಲ್ಲಿರುವ ಹಟ್ಗಳವರೆಗೂ ಅಲೆಗಳು ಅಪ್ಪಳಿಸುತ್ತಿವೆ. ಬೀಚ್ ಉತ್ತರ ಭಾಗದಲ್ಲಿ ಹಾಕಲಾದ ತಡೆಗೋಡೆ ಸಮೀಪವೂ ಕೊರೆತವಾಗಿದ್ದು ದಂಡೆಗೆ ಹಾಕಿದ ಕಲ್ಲು ಜರಿಯುವ ಸಾಧ್ಯತೆಗಳಿವೆ.
ಹಲವು ಕುಟುಂಬಗಳ ಸ್ಥಳಾಂತರ
ಬೈಂದೂರು ತಾಲೂಕಿನ ಕಡಲ ತೀರದ ನಾಲ್ಕು ಕುಟುಂಬಗಳನ್ನು ಉಪ್ಪುಂದ ಜೂನಿಯರ್ ಕಾಲೇಜಿನ ಪುನರ್ವಸತಿ ಕೇಂದ್ರಕ್ಕೆ, ಕುಂದಾಪುರ ತಾಲೂಕಿನ 7 ಕುಟುಂಬಗಳನ್ನು ಸಂಬಂಧಿಕರ ಮನೆಗೆ, ಕಾಪು ತಾಲೂಕಿನ ಒಂದು ಕುಟುಂಬ ವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸ ಲಾಗಿದೆ.
ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮದ ಸುಮಾರು 50ರಿಂದ 60 ಮಂದಿ ಯನ್ನು ಪರಿಸ್ಥಿತಿ ಅವಲೋಕಿಸಿ ಕೋಡಿ ಶಾಲೆಯಲ್ಲಿ ತೆರೆದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಈಗಾಗಲೇ ತಿಳಿಹೇಳಲಾಗಿದೆ. ಕಾಪುವಿನಲ್ಲಿ ಈಗಾಗಲೇ ಸಮುದ್ರ ತೀರದ ಜನರಿಗೆ ಪರಿಸ್ಥಿತಿ ಬಿಗಡಾಯಿಸಿದ್ದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.