ತೌಕ್ತೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿ: ಸಚಿವ ಬೊಮ್ಮಾಯಿ

Update: 2021-05-15 15:45 GMT

ಉಡುಪಿ, ಮೇ 15: ಉಡುಪಿ ಜಿಲ್ಲೆಯ ಕರಾವಳಿಗೆ ಅಪ್ಪಳಿಸಿರುವ ತೌಕ್ತೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿ. ಚಂಡಮಾರುತದಿಂದ ಯಾವುದೇ ಅಪಾಯ ಆಗದಂತೆ ಮುನ್ನೆಚ್ಚರಿಕೆ ವಹಿಸಿ.ಎಸ್‌ಡಿಆರ್‌ಎಫ್ ನಿಧಿಯಿಂದ ನೀಡಲಾಗಿರುವ 60 ಕೋಟಿ ರೂ. ಹಣವನ್ನು ಸಮರ್ಪಕ ವಾಗಿ ಬಳಕೆ ಮಾಡಿಕೊಳ್ಳುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಉಡುಪಿ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶನಿವಾರ ಬೆಂಗಳೂರಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಜತೆ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ತೌಕ್ತೆ ಚಂಡಮಾರುತ ನಾಲ್ಕು ದಿನಗಳ ಕಾಲ ತನ್ನ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕರಾವಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಬೇಕು. ತಗ್ಗು ಪ್ರದೇಶದಿಂದ ಸಾರ್ವಜನಿಕ ರನ್ನು ಸ್ಥಳಾಂತರಗೊಳಿಸಿ. ಸ್ಥಳಾಂತರಗೊಳಿಸಿದ ಜನರಿಗೆ ಆಹಾರ ಮತ್ತು ಇತರೆ ವಸ್ತುಗಳನ್ನು ಪೂರೈಕೆ ಮಾಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಬೆಂಗಳೂರಿನಿಂದ ಚಂಡಮಾರುತ ಅನಾಹುತ ತಪ್ಪಿಸಲು ಮತ್ತು ಅಪಾಯ ದಲ್ಲಿ ಸಿಲುಕಿದ್ದ ಜನರನ್ನ ರಕ್ಷಣೆ ಮಾಡಲು ತಂಡವನ್ನು ಕಳುಹಿಸ ಲಾಗುವುದು. ಪೊಲೀಸ್ ಇಲಾಖೆ, ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕೆಲಸ ನಿರ್ವಹಿಸಿ ಅನಾಹುತ ಗಳು ಸಂಭವಿಸದಂತೆ ಕಾರ್ಯ ನಿರ್ವಹಿಸುವಂತೆ ಬಸವರಾಜ್ ಬೊಮ್ಮಾಯಿ ಸೂಚನೆಗಳನ್ನು ನೀಡಿದರು.

ಈಗಾಗಲೇ ಎಸ್‌ಡಿಆರ್‌ಎಫ್ ನಿಧಿಯಿಂದ 60ಕೋಟಿ ರೂ. ಹಣವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಆ ಹಣವನ್ನು ಸದ್ಬಳಕೆ ಮಾಡಿಕೊಂಡು ಕೆಲಸ ಮಾಡುವಂತೆ ಅವರು ತಿಳಿಸಿದರು.

ಕರಾವಳಿಗೆ ಹೊಂದಿಕೊಂಡಿರುವ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯಲ್ಲಿ ಚಂಡಮಾರುತದ ಪ್ರಭಾವ ಉಂಟಾಗುವ ಸಾಧ್ಯತೆ ಇದೆ. ಯಾವುದೇ ರೀತಿಯ ಅನಾಹುತ, ಆಪತ್ತು ಎದುರಾದರೂ ಅದನ್ನು ನಿವಾರಿಸಲು ಸಿದ್ಧತೆ ಮಾಡಿಕೊಳ್ಳಿ. ತೌಕ್ತೆ ಚಂಡಮಾರುತದ ಬಗ್ಗೆ ಎಚ್ಚರ ಇರಲಿ ಎಂದರು.

ಕೋವಿಡ್ ನಿಯಂತ್ರಣಕ್ಕೆ ಗಮನ ಹರಿಸಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಆದ್ಯತೆ ನೀಡಿ. ಖಾಸಗಿ ಆಸ್ಪತ್ರೆಗಳಿಂದ ಸರಕಾರಕ್ಕೆ ಬರಬೇಕಾದ ಬೆಡ್‌ಗಳನ್ನು ಪಡೆಯಿರಿ. ಆಕ್ಸಿಜನ್ ಪೂರೈಕೆಯನ್ನು ಸಮರ್ಪಕ ವಾಗಿ ಕೈಗೊಳ್ಳಿ. ಆಮ್ಲಜನಕವನ್ನು ಅಗತ್ಯಕ್ಕೆ ಅನುಗುಣವಾಗಿ ಬಳಕೆಮಾಡಿ. ಚಿಕಿತ್ಸೆ ಪಡೆದು ಗುಣಮುಖರಾಗಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲು ಮಾಡಿ. ಇಂಥವರಿಂದ ತೆರವಾದ ಐಸಿಯು ಮತ್ತು ಎಚ್ಡಿಯು ಬೆಡ್ ಗಳನ್ನು ಗಂಭೀರವಾಗಿ ಸೋಂಕಿತಗೊಂಡ ವ್ಯಕ್ತಿಗಳಿಗೆ ಬಳಕೆಮಾಡಿ ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸುನಿಲ್‌ಕುಮರ್, ಲಾಲಾಜಿ ಆರ್ ಮೆಂಡನ್, ಜಿಲ್ಲಾದಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ.ಸುಧೀರ್‌ಚಂದ್ರ ಸೂಡಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News