ಚಂಡಮಾರುತ: ಹಾನಿಗೊಳಗಾದ ಪ್ರದೇಶಗಳಿಗೆ ಕಾಂಗ್ರೆಸ್ ನಿಯೋಗ ಭೇಟಿ
ಉಡುಪಿ, ಮೇ 16: ತೌಕ್ತೆ ಚಂಡಮಾರುತದಿಂದ ಉಡುಪಿ ಕರಾವಳಿ ಭಾಗದಲ್ಲಿ ಜನ ಜಾನುವಾರು ಕೃಷಿಗೆ ಅಪಾರ ಹಾನಿಯುಂಟಾಗಿದ್ದು ಜಿಲ್ಲಾಡಳಿತ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿ ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಚಂಡಮಾರುತದಿಂದ ಸಂಕಷ್ಟಕ್ಕೊಳಗಾದ ಪಡುಬಿದ್ರಿ ಎರ್ಮಾಳು, ಕಾಪು, ಪಡುಕೆರೆ, ಮಲ್ಪೆಹಾಗೂ ಇತರ ಹಾನಿಗೊಳಗಾದ ಪ್ರದೇಶಗಳಿಗೆ ರವಿವಾರ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ನೀಡಿದ ಬಳಿಕ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಈ ನಿಟ್ಟಿನಲ್ಲಿ ಈಗಾಗಲೇ ತುರ್ತು ಕಾರ್ಯಪಡೆ ರಚಿಸಿದ್ದು, ಈ ಕಾರ್ಯಪಡೆ ದಿನದ 24 ಗಂಟೆಯೂ ಸಂಕಷ್ಟಕ್ಕೊಳಗಾ ದವರನ್ನು ಸ್ಥಳಾಂತರಿಸಲು, ತಾತ್ಕಾಲಿನ ವಸತಿ ಕಲ್ಪಿಸಲು ಸೇರಿದಂತೆ ಯಾವುದೇ ರಕ್ಷಣಾತ್ಮಕ ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಡಳಿತದೊಂದಿಗೆ ಸಹಕರಿಸಲು ಸಿದ್ದವಿದೆ ಎಂದು ಅವರು ತಿಳಿಸಿದ್ದಾರೆ.
ಈ ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಕಾಯದರ್ಶಿ ಪ್ರಶಾಂತ್ ಜತ್ತನ್ನ, ಕಾನೂನು ಘಟಕಾಧ್ಯಕ್ಷ ಹರೀಶ್ ಶೆಟ್ಟಿ ಪಾಂಗಾಳ, ಸೇವಾದಳದ ಅಧ್ಯಕ್ಷ ಕಿಶೋರ್ ಕುಮಾರ್ ಎರ್ಮಾಳ್, ದೀಪಕ್, ಮಧುಕರ್, ಮೋಹನ ಸುವರ್ಣ, ಗ್ರಾಪಂ ಸದಸ್ಯೆ ಅರುಣ ಕುಮಾರಿ ಮೊದಲಾದವರು ಇದ್ದರು.