ದ.ಕ. ಡಿಸಿಯೊಂದಿಗೆ ಪ್ರಧಾನಿ ಮೋದಿ ವೀಡಿಯೊ ಸಂವಾದ
ಮಂಗಳೂರು, ಮೇ 18: ಕೋವಿಡ್ ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಎದುರಿಸುವ ಸವಾಲುಗಳೇನು ಎಂಬುದು ತಮಗೆ ಚೆನ್ನಾಗಿ ಗೊತ್ತಿರುತ್ತದೆ. ಅವುಗಳನ್ನು ಅರಿತು ಕೊರೋನ ಯುದ್ಧದಲ್ಲಿ ಫಿಲ್ಡ್ ಕಮಾಂಡರ್ಗಳಾಗಿ ಫ್ರಂಟ್ಲೈನ್ ವಾರಿಯರ್ಸ್ಗಳು ಸಹಿತ ಇತರ ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಭಿನ್ನ ಯೋಜನೆ, ಆಲೋಚನೆಗಳ ಮೂಲಕ ಸೋಂಕನ್ನು ತಡೆಗಟ್ಟಬೇಕು. ತಾವು ತಮ್ಮ ಜಿಲ್ಲೆ ಗೆದ್ದರೆ ಇಡೀ ದೇಶವೇ ಗೆದ್ದಂತೆ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಅತೀಹೆಚ್ಚು ಕೊರೋನ ಸೋಂಕಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಂಗಳವಾರ ನಡೆದ ವೀಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಕೋವಿಡ್ ಸಂದಿಗ್ಧ ಸಮಯದಲ್ಲಿ ಅತ್ಯಂತ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೀರಿ. ಬಹಳಷ್ಟು ಜನರು ತಮ್ಮ ಮನೆಗಳಿಗೆ ಹೋಗಿಲ್ಲ. ಮನೆಯ ಸದಸ್ಯರನ್ನು ಭೇಟಿಯಾಗಿಲ್ಲ. ಅನೇಕರು ಸೋಂಕಿಗೆ ತುತ್ತಾದರೂ ಗುಣಮುಖರಾಗಿ ಮತ್ತೆ ಎಂದಿನಂತೆ ಕರ್ತವ್ಯಕ್ಕೆ ಮರಳಿದ್ದೀರಿ ಎಂದು ಡಿಸಿಗಳ ಕೆಲಸವನ್ನು ಶ್ಲಾಘಿಸಿದ ಪ್ರಧಾನಿ ಕೋವಿಡ್ ಮಹಾಮಾರಿ ಕಟ್ಟಿಹಾಕುವ ನಿಟ್ಟಿನಲ್ಲಿ ನಡೆಸುತ್ತಿರುವ ಈ ಹೋರಾಟದಲ್ಲಿ ನವೀನ ಆಲೋಚನೆಗಳು, ಆವಿಷ್ಕಾರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು.ಇದು ಇತರ ಜಿಲ್ಲೆಗಳಿಗೆ ಮಾದರಿಯಾಗಲಿದೆ ಎಂದರು.
ಪಿಎಂ ಕೇರ್ಸ್ ಫಂಡ್ ನಿಧಿಯಿಂದ ದೇಶದ ಪ್ರತಿ ಜಿಲ್ಲೆಗಳಲ್ಲಿಯೂ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಶೀಘ್ರ ಸ್ಥಾಪನೆ ಮಾಡುವುದಾಗಿ ಘೋಷಿಸಿದ ಪ್ರಧಾನಿ ಮೋದಿ ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಮಾನಿಟರಿಂಗ್ ಕಮಿಟಿ ಕಾರ್ಯಾರಂಭ ಮಾಡಬೇಕು. ಲಸಿಕಾ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಬೇಕು ಎಂದರು.
ಹಳ್ಳಿಗಳಲ್ಲಿ ‘ನನ್ನ ಹಳ್ಳಿ ಕೊರೋನ ಮುಕ್ತ ಮಾಡುವೆ ಮತ್ತು ಕೊರೋನ ಸೊಂಕು ನನ್ನ ಗ್ರಾಮಕ್ಕೆ ಬರದಂತೆ ತಡೆಗಟ್ಟುವೆ’ ಎಂಬ ಪ್ರತಿಜ್ಞೆಯನ್ನು ಜನರು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದ ಅವರು ಕೊರೋನ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಳೀಯ ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಬೇಕು ಎಂದು ಸಲಹೆ ನೀಡಿದರು.
ಕೊರೋನ ಮುಕ್ತ ಗ್ರಾಮಕ್ಕೆ ಸಂಕಲ್ಪಿಸುವುದರ ಜೊತೆಗೆ ಲಸಿಕಾ ಅಭಿಯಾನ ಚುರುಕುಗೊಳಿಸಲು ನಿರ್ದೇಶನ ನೀಡಿದ ಅವರು ಕೋವಿಡ್ ಕುರಿತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಬೇಕು ಮತ್ತು ಈ ಕುರಿತು ಜಾಗೃತಿ ಮೂಡಿಸಬೇಕು. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಸಹಭಾಗಿತ್ವ ಅಗತ್ಯ. ಗ್ರಾಪಂ ಸದಸ್ಯನಿಂದ ಹಿಡಿದು ಸಂಸತ್ ಸದಸ್ಯನವರೆಗೆ ಪಕ್ಷಬೇಧ ಮರೆತು ಕಾರ್ಯನಿರ್ವಸಿ ಎಂದು ಕರೆ ನೀಡಿದರು.
ವೀಡಿಯೋ ಸಂವಾದದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ಹಾಣ ಸಹಿತ 10 ರಾಜ್ಯಗಳ ಮುಖ್ಯಮಂತ್ರಿಗಳು, ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಹಿತ ರಾಜ್ಯದ 17 ಜಿಲ್ಲೆಗಳು ಸೇರಿದಂತೆ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಂಡರು.