×
Ad

ಪುತ್ತಿಗೆ ಮಠ, ಗುರ್ಮೆ ಫೌಂಡೇಶನ್ ಗೆ ಆಂಬ್ಯುಲೆನ್ಸ್ ಕೊಡುಗೆ

Update: 2021-05-20 22:56 IST

ಕಾಪು: ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ಹಾಗೂ ತುರ್ತು ಸೇವೆಯ ನಿಮಿತ್ತ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಗುರ್ಮೆ ಫೌಂಡೇಶನ್‍ನ ಪ್ರವರ್ತಕ ಸುರೇಶ್ ಶೆಟ್ಟಿ ಗುರ್ಮೆ ಇವರ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ಕೇಂದ್ರಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಚಿತ ಆಂಬುಲೆನ್ಸ್ ಸೇವೆಯನ್ನು ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕೊರೊನಾ ಸಂಕಷ್ಟದಿಂದ ಜನರ ಜೀವವನ್ನು ರಕ್ಷಿಸಲು ಸರ್ಕಾರ ಹಲವಾರು ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಇದರೊಂದಿಗೆ ಪೂರಕವಾಗಿ ನಾವೂ ಕೂಡಾ ಕೈ ಜೋಡಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಶ್ರೀ ಕೃಷ್ಣ ದೇವರ ಅನುಗ್ರಹ ಮತ್ತು ಜನರ ಸಹಕಾರದೊಂದಿಗೆ ಭಾರತ ಶೀಘ್ರ ಕೊರೊನಾ ಮುಕ್ತ ರಾಷ್ಟವಾಗಿ ಮೂಡಿ ಬರಲಿ ಎಂದು ಆಶೀರ್ವದಿಸಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕೋವಿಡ್ ಸಂಕಷ್ಟವನ್ನು ಎದುರಿಸಲು ಮತ್ತು ರೋಗಿಗಳಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸಲು ಅಗತ್ಯವಾಗಿ ಬೇಕಿದ್ದ ನಾಲ್ಕು ಆಂಬುಲೆನ್ಸ್‍ಗಳನ್ನು ಪುತ್ತಿಗೆ ಮಠ ಮತ್ತು ಗುರ್ಮೆ ಫೌಂಡೇಷನ್ ಜೊತೆಗೂಡಿ ನೀಡುತ್ತಿರುವುದು ಶ್ಲಾಘನೀಯವಾಗಿದೆ. 

ಗುರ್ಮೆ ಫೌಂಡೇಶನ್‍ನ ಪ್ರವರ್ತಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕೊರೊನಾ ಸಂಕಷ್ಟದ ನಡುವೆಯೇ ನನ್ನ ಆತ್ಮೀಯಾಗಿದ್ದ ನೂರಾರು ಮಂದಿಯನ್ನು ನಾವು ಕಳೆದು ಕೊಂಡಿದ್ದು ಕಳೆದ ವಾರವಷ್ಟೇ ಆಂಬುಲೆನ್ಸ್ ಸಿಗದೇ ಪರಿಚಿತರಿಬ್ಬರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದಾಗ ಆಂಬುಲೆನ್ಸ್ ಕೊರತೆಯ ಬಗ್ಗೆ ಮಾಹಿತಿ ಸಿಕ್ಕಿದ್ದು, ತತ್‍ಕ್ಷಣ ಕಾರ್ಯಪ್ರವೃತ್ತನಾಗಿ ಪುತ್ತಿಗೆ ಶ್ರೀಗಳ ಸಹಕಾರದೊಂದಿಗೆ ಪುತ್ತಿಗೆ ಮಠ ಮತ್ತು ಗುರ್ಮೆ ಫೌಂಡೇಷನ್‍ನ ವತಿಯಿಂದ ಜಂಟಿಯಾಗಿ 4 ಆಂಬುಲೆನ್ಸ್‍ಗಳನ್ನು ಜನರ ಸೇವೆಗಾಗಿ ಉಚಿತವಾಗಿ ಒದಗಿಸಲು ಯೋಜನೆ ರೂಪಿಸಿದ್ದೇವೆ.

24 ಗಂಟೆಯೂ ಸೇವೆ: ಕಾಪು ಮತ್ತು ಉಡುಪಿ ತಾಲೂಕು ವ್ಯಾಪ್ತಿಯ ಕಾಪು, ಶಿರ್ವ, ಪಡುಬಿದ್ರಿ, ಹಿರಿಯಡ್ಕ ಸೇರಿದಂತೆ ನಾಲ್ಕು ಕೇಂದ್ರಗಳಿಗೆ ಕೊರೊನಾ ತುರ್ತು ಸೇವೆಗಾಗಿ ಲಭ್ಯವಿದೆ. ದಿನದ 24 ಗಂಟೆಯೂ ಆಂಬುಲೆನ್ಸ್ ಸೇವೆ ಲಭ್ಯವಿದೆ. ತುರ್ತು ಸೇವೆಗಾಗಿ ಸಂಪರ್ಕಿಸಿದರೆ ಸೇವಾ ಕಾರ್ಯಕರ್ತರು ಸಹಕಾರ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯರಾದ ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಕಾಪು ನಗರ ಯೋಜನಾ ಪ್ರಾ„ಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕ  ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಮೀನುಗಾರಿಕಾ ಫೆಡರೇಷನ್‍ನ ಅಧ್ಯಕ್ಷ ಯಶ್‍ಪಾಲ್ ಸುವರ್ಣ, ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಪ್ರಶಾಂತ್ ಪಿ. ಶೆಟ್ಟಿ, ಪ್ರಫುಲ್ಲ ಶೆಟ್ಟಿ ಎಲ್ಲೂರು ಗುತ್ತು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್, ಸಮಾಜ ಸೇವಕ ಲೀಲಾಧರ ಶೆಟ್ಟಿ ಉಪಸ್ಥಿತರಿದ್ದರು.

ಕಾಪು ಪ್ರಾಥಮಿಕ ಆರೋಗ್ಯ ಕ್ಷೇತ್ರಾರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News