ದೇಶದಲ್ಲಿ ಕೋವಿಡ್ ಲಸಿಕೆ ಕೊರತೆಯಿರುವಾಗ ಪಾಕಿಸ್ತಾನಕ್ಕೆ ನೀಡಲು ಕಾರಣವೇನು: ಖಾದರ್ ಪ್ರಶ್ನೆ
ಮಂಗಳೂರು, ಮೇ 21: ದೇಶದ ಜನರಿಗೆ ಕೋವಿಡ್ ಲಸಿಕೆಯ ಕೊರತೆ ಇರುವಾಗ ಪಾಕಿಸ್ತಾನಕ್ಕೆ ಲಸಿಕೆ ಪೂರೈಕೆ ಮಾಡಲು ಕೇಂದ್ರ ಸರಕಾರ ಹೆಚ್ಚು ಆಸಕ್ತಿ ವಹಿಸಲು ಕಾರಣವೇನು? ಈ ಬಗ್ಗೆ ಸರಕಾರ ದೇಶದ ಜನತೆ ಉತ್ತರಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ರೀಸರ್ಚ್ ಡಿಪಾರ್ಟ್ಮೆಂಟ್ನ ಲೆಟರ್ ಹೆಡ್ನ ನಕಲಿ ಪತ್ರವನ್ನು ತಯಾರಿಸಿ ಕೋಮು ಸಾಮರಸ್ಯ ಕದಡುವ ಸಂದೇಶಗಳನ್ನು ಟೂಲ್ ಕಿಟ್ ಆ್ಯಪ್ ಸೇರಿದಂತೆ ಜಾಲತಾಣಗಳಲ್ಲಿ ಹರಡುತ್ತಿರುವ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವೆ ಸ್ಮತಿ ಇರಾನಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಇತರ ಹಲವರ ವಿರುದ್ಧ ದಿಲ್ಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
*ಪ್ಯಾಕೇಜ್ನಲ್ಲಿ ಕರಾವಳಿಗೆ ಅನ್ಯಾಯ: ಕೋವಿಡ್ ಸಂತ್ರಸ್ತರಿಗೆ ರಾಜ್ಯ ಸರಕಾರ ಘೋಷಿಸಿರುವ ಪ್ಯಾಕೇಜ್ ನಲ್ಲಿ ಕರಾವಳಿಯ ಜನರನ್ನು ನಿರ್ಲಕ್ಷಿಸಲಾಗಿದೆ. ಮೀನುಗಾರರಿಗೆ ನೀಡಬೇಕಾದ ಡೀಸೆಲ್ ಸಬ್ಸಿಡಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕರಾವಳಿಯ ಮೀನುಗಾರರಿಗೆ, ಬೀಡಿ ಕಾರ್ಮಿಕರಿಗೆ, ಹೊಟೇಲ್ ಕಾರ್ಮಿಕರು, ಬಸ್ ಕ್ಯಾಬ್ ವಾಹನಗಳ ಚಾಲಕರಿಗೆ ಕಾರ್ಮಿಕರಿಗೆ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ ಎಂದು ಖಾದರ್ ಟೀಕಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಪ್ರಚಾರದ ಪ್ಯಾಕೇಜ್ನ್ನು ರಾಜ್ಯ ಸರಕಾರ ಘೋಷಿಸಿದೆ. ಕನಿಷ್ಠ 10 ಸಾವಿರ ರೂ. ಕಾರ್ಮಿಕರಿಗೆ ನೀಡಬೇಕೆಂದು ಕಾಂಗ್ರೆಸ್ ಸಲಹೆ ನೀಡಿತ್ತು. ಆದರೆ ಸರಕಾರ ಜುಜುಬಿ ಪ್ಯಾಕೇಜ್ ಘೋಷಣೆ ಮಾಡಿದೆ. ಖಾಸಗಿ ಶಿಕ್ಷಕರನ್ನು ಪ್ಯಾಕೇಜ್ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಅವರ ಕ್ಷೇಮ ನಿಧಿಯಿಂದಲೂ ಹಣ ನೀಡಲಾಗುತ್ತಿಲ್ಲ. ಮೊದಲು ಕೋವಿಡ್ ನಿಯಂತ್ರಿಸಿ ಸರಕಾರದ ಹಣದಿಂದ ಮೋದಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಳಕೆ ಮಾಡಬೇಡಿ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮನಪಾ ವಿಪಕ್ಷ ನಾಯಕ ಎ.ಸಿ. ವಿನಯರಾಜ್, ಮುಹಮ್ಮದ್ ಮೋನು, ಸದಾಶಿವ ಉಳ್ಳಾಲ್, ಸುಭೋದಯ ಆಳ್ವ, ಅನಿಲ್ ಕುಮಾರ್, ಸಿ.ಎಂ.ಮುಸ್ತಫ ಮತ್ತಿತರರು ಉಪಸ್ಥಿತರಿದ್ದರು.