ಎಂಆರ್ಪಿಎಲ್ ಕಂಪೆನಿ ನೇಮಕಾತಿಗೆ ತಡೆ: ಶಾಸಕ ಭರತ್ ಶೆಟ್ಟಿ
ಮಂಗಳೂರು, ಮೇ 22: ಎಂಆರ್ಪಿಎಲ್ ಕಂಪೆನಿಯ 224 ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು ಮತ್ತು ಎಂಆರ್ಪಿಎಲ್ ಅಧಿಕಾರಿಗಳ ಸಮ್ಮುಖ ಶನಿವಾರ ನಡೆದ ಸಭೆಯಲ್ಲಿ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಎಂಆರ್ಪಿಎಲ್ ಆಡಳಿತ ನಿರ್ದೇಶರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳೀಯರಿಗಾದ ಆನ್ಯಾಯದ ಬಗ್ಗೆ ಎಂಆರ್ಪಿಎಲ್ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಅಲ್ಲದೆ ಈ ನೇಮಕಾತಿ ಪಟ್ಟಿ ಯನ್ನು ಕೂಡಲೇ ತಡೆಹಿಡಿಯಲು ಸೂಚಿಸಲಾಯಿತು. ನೇಮಕಾತಿಯ ಮುಂದಿನ ಪ್ರಕ್ರಿಯೆಯನ್ನು ಸಂಸದರ, ಉಸ್ತುವಾರಿ ಸಚಿವರ ಮಾರ್ಗ ದರ್ಶನದಲ್ಲಿ ನಡೆಸಲು ಎಂಆರ್ಪಿಎಲ್ ಅಧಿಕಾರಿಗಳಿಗೆ ಆದೇಶಿಸಲಾಯಿತು ಎಂದು ಡಾ. ಭರತ್ ಶೆಟ್ಟಿ ತಿಳಿಸಿದ್ದಾರೆ.