×
Ad

ಜೂ.1ರಿಂದ ನಂದಿನಿ ಗ್ರಾಹಕರಿಗೆ ಉಚಿತ ಹೆಚ್ಚುವರಿ ಹಾಲು

Update: 2021-05-31 18:18 IST
ಸಾಂದರ್ಭಿಕ ಚಿತ್ರ

ಉಡುಪಿ, ಮೇ 31: ಮಂಗಳೂರಿನ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಇದೀಗ ಹಾಲು ಉತ್ಪಾದನೆ ಅಧಿಕವಾಗಿರುವುದರಿಂದ, ಹಾಲನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಹಾಗೂ ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಜೂ.1ರಿಂದ 30ರವರೆಗೆ ಎಲ್ಲಾ ಮಾದರಿಯ ನಂದಿನಿ 500ಮಿ.ಲೀ. ಹಾಗೂ ಒಂದು ಲೀ.ಹಾಲಿನ ಪೊಟ್ಟಣಗಳ ಮೇಲೆ ತಲಾ 20ಮಿ.ಲೀ. ಹಾಗೂ 40ಮಿ.ಲೀ. ಹಾಲನ್ನು ಗ್ರಾಹಕರಿಗೆ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ಲಾಕ್‌ಡೌನ್ ಪರಿಣಾಮ ಶುಭ ಸಮಾರಂಭ, ದೇವಸ್ಥಾನ, ವಿದ್ಯಾಸಂಸ್ಥೆಗಳ ಹಾಸ್ಟೆಲ್, ಹೊಟೇಲ್‌ಗಳಿಗೆ ನಿರ್ಬಂಧವಿರುವುದರಿಂದ ಹಾಲು ಮತ್ತು ಮೊಸರುಗಳ ಮಾರಾಟದಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ರಾಜ್ಯಾದ್ಯಂತ ಕೊರೋನ ಸೋಂಕಿನ ಎರಡನೇ ಅಲೆಯು ತೀವ್ರವಾಗಿದ್ದು, ಇದರಿಂದ ಕಳೆದ ಎ.28ರಿಂದ ರಾಜ್ಯಾದ್ಯಂತ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಹಾಲಿನ ಮಾರಾಟದಲ್ಲಿ ಹೆಚ್ಚಳ ಸಾಧ್ಯವಾಗುತ್ತಿಲ್ಲ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಕ್‌ಡೌನ್‌ನಂಥ ಕ್ಲಿಷ್ಟಕರ ಪರಿಸ್ಥಿತಿ ಇದ್ದರೂ, ಹಾಲು ಉತ್ಪಾದಕರು ಸಂಘಗಳಿಗೆ ಗುಣಮಟ್ಟದ ಹಾಲನ್ನು ಪೂರೈಸುತ್ತಿದ್ದು, ನಂದಿನಿ ಬಳಗ ಜೀವಭಯ ತೊರೆದು ಅಗತ್ಯವಸ್ತುಗಳಲ್ಲಿ ಒಂದಾದ ಹಾಲು ಪೂರೈಸುವ ಮೂಲಕ ಗ್ರಾಹಕರ ಸೇವೆಯಲ್ಲಿ ತೊಡಗಿಕೊಂಡಿದೆ ಎಂದು ಕೊಡವೂರು ರವಿರಾಜ್ ಹೆಗ್ಡೆ ಹೇಳಿದ್ದಾರೆ.

ಹೀಗಾಗಿ ಹಾಲನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಒಕ್ಕೂಟ ‘ಹೆಚ್ಚು ಹಾಲು ಕುಡಿಯಿರಿ’ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದರಿಂದ ಜೂನ್ ತಿಂಗಳಿಡೀ (ನಾಳೆಯಿಂದ ಜೂ.30ರವರೆಗೆ) ಎಲ್ಲಾ ಮಾದರಿ ನಂದಿನಿಯ ಅರ್ಧ ಲೀಟರ್ ಹಾಗೂ ಒಂದು ಲೀಟರ್ ಹಾಲಿನ ಪ್ಯಾಕ್‌ಗಳ ಜೊತೆ ಕ್ರಮ ವಾಗಿ 20ಮಿ.ಲೀ. ಹಾಗೂ 40ಮಿ.ಲೀ. ಹಾಲನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದಿದ್ದಾರೆ.

ಕಹಾಮ ಅಧೀನದಲ್ಲಿರುವ 14 ಒಕ್ಕೂಟಗಳಲ್ಲಿ ಏಕಕಾಲಕ್ಕೆ ಒಂದು ಲೀಟರ್ ಹಾಲಿನ ಖರೀದಿಗೆ 40ಮಿ.ಲೀ. ಉಚಿತ ಹಾಲು ಯೋಜನೆ ಜಾರಿಯಾಗುತ್ತಿದೆ. ಗ್ರಾಹಕರು ಇದರ ಪ್ರಯೋಜನೆ ಪಡೆದು ಆರೋಗ್ಯ ವೃದ್ಧಿಸಿಕೊಂಡು ಸದೃಢರಾಗುವಂತೆ ರವಿರಾಜ ಹೆಗ್ಡೆ ಹಾರೈಸಿದ್ದಾರೆ. ರಾಜ್ಯದ ಜನತೆ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಹೆಚ್ಚೆಚ್ಚು ಬಳಸುವಂತೆ ಹೆಗ್ಡೆ ಕರೆ ನೀಡಿದ್ದಾರೆ.

ಅಲ್ಲದೇ ಒಕ್ಕೂಟದ ಸಿಬ್ಬಂದಿಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳನ್ನು ‘ಕೊರೋನಾ ವಾರಿಯರ್ಸ್‌’ ಎಂದು ಗುರುತಿಸಲು ಕರ್ನಾಟಕ ಹಾಲು ಮಹಾಮಂಡಳ ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಅವರು ಕಹಾಮದ ಮೂಲಕ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News