ಹಿರಿಯ ನಾಗರಿಕರಿಗೆ ಮನೆಗಳಲ್ಲಿ ಲಸಿಕೆ ನೀಡಿಕೆ ಯಾಕೆ ಅಸಾಧ್ಯ?: ಕೇಂದ್ರ, ರಾಜ್ಯಗಳಿಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

Update: 2021-06-02 17:57 GMT

ಮುಂಬೈ,ಜೂ.2: ಕೋವಿಡ್-19 ಲಸಿಕೀಕರಣ ಅಭಿಯಾನಗಳು ಈಗ ಹಲವಾರು ಹೌಸಿಂಗ್ ಸೊಸೈಟಿ (ವಸತಿ ಸಂಕೀರ್ಣ)ಗಳಲ್ಲಿ ನಡೆಯುತ್ತಿರುವಾಗ, ಆರೋಗ್ಯ ಇಲಾಖೆಗಳ ಅಧಿಕಾರಿಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಹಿರಿಯ ನಾಗರಿಕರು ಅದರಲ್ಲೂ ವಿಶೇಷವಾಗಿ ಭಿನ್ನಸಾಮರ್ಥ್ಯದವರು ಹಾಗೂ ಹಾಸಿಗೆ ಹಿಡಿದ ವ್ಯಕ್ತಿಗಳಿಗೆ ಅವರ ಮನೆಗಳಲ್ಲಿ ಯಾಕೆ ಲಸಿಕೆ ನೀಡಬಾರದು ಎಂದು ಬಾಂಬೆ ಹೈಕೋರ್ಟ್ ಬುಧವಾರ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಪ್ರಶ್ನಿಸಿದೆ.

  
 75 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು, ಭಿನ್ನಸಾಮರ್ಥ್ಯದವರು, ಹಾಸಿಗೆ ಹಿಡಿದವರು ಮತ್ತು ಗಾಲಿಕುರ್ಚಿಅವಲಂಭಿಸಿರುವವರಿಗೆ ಮನೆ ಮನೆ ಲಸಿಕೀಕರಣ ಅಭಿಯಾನವನ್ನು ಆರಂಭಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶ ನೀಡಬೇಕೆಂದು ಕೋರಿ ನ್ಯಾಯವಾದಿಗಳಾದ ಧೃತಿ ಕಪಾಡಿಯಾ ಹಾಗೂ ಕುನಾಲ್ ತಿವಾರಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು. ಇಂದು ಅರ್ಜಿಯ ಆಲಿಕೆಯನ್ನು ನಡೆಸಿದ ಸಂದರ್ಭದಲ್ಲಿ ಮುಂಬೈ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಂಕರ್ ದತ್ತಾ ಹಾಗೂ ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠ ರಾಜ್ಯ ಸರಕಾರವನ್ನು ಹೀಗೆ ಪ್ರಶ್ನಿಸಿದೆ.
 
ಮನೆಮನೆ ಲಸೀಕರಣ ಕಾರ್ಯಕ್ರಮವು ಅಸಾಧ್ಯವೆಂದು ಕೇಂದ್ರ ಸರಕಾರದ ನೀತಿ ಹೇಳುತ್ತಿದೆಯಾದರೂ, ವಸಾಯಿ-ವಿರಾರ್ ಮಹಾನಗರ ಪಾಲಿಕೆಯು ಪಾಲ್ಘರ್ ಜಿಲ್ಲೆಯಲ್ಲಿ ಯಶಸ್ವಿಯಾಗಿ ಆರಂಭಿಸಿದೆ ಎಂದು ಕಪಾಡಿಯಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
 
ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಕಾಲಾವಕಾಶ ನೀಡಬೇಕೆಂದು ಕೋರಿದ್ದರು. ಬಳಿಕ ನ್ಯಾಯಪೀಠವು ಮುಂದಿನ ಆಲಿಕೆಯನ್ನು ಜೂನ್ 8ಕ್ಕೆ ನಿಗದಿಪಡಿಸಿದೆ.

ಜುಲೈ ತಿಂಗಳ ಅಂತ್ಯದೊಳಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸಲಾಗುವುದೆಂದು ಅವರು ತಿಳಿಸಿದರು.

ಮನೆಮನೆ ಲಸೀಕರಣ ಅಭಿಯಾನ ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಕೋರಿ ಕೋವಿಡ್19 ಲಸಿಕೀಕರಣಕ್ಕಾಗಿನ ರಾಷ್ಟ್ರೀಯ ತಜ್ಞರ ಸಮಿತಿಗೆ ಬಾಂಬೆ ಹೈಕೋರ್ಟ್ ಕಳೆದ ತಿಂಗಳು ಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News