×
Ad

ಖಾಸಗಿ ಆಸ್ಪತ್ರೆಗಳ ಕೋವಿಡ್ ಲಸಿಕೆ ದಂಧೆ ನಿಲ್ಲಿಸಿ, ಎಲ್ಲರಿಗೂ ಉಚಿತವಾಗಿ ಲಸಿಕೆಗೆ ಯೋಜನೆ ರೂಪಿಸಿ: ಕೆಸಿವಿಟಿ ಮನವಿ

Update: 2021-06-03 12:48 IST

ಮಂಗಳೂರು, ಜೂ.3: ಖಾಸಗಿ ಆಸ್ಪತ್ರೆಗಳ ಕೋವಿಡ್ ಲಸಿಕೆ ದಂಧೆಯನ್ನು ನಿಲ್ಲಿಸಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಕ್ರಾಂತಿಕಾರಿ ಯೋಜನೆ ರೂಪಿಸುವಂತೆ ಜನಸಹಾಯ - ಕರ್ನಾಟಕ ಕೋವಿಡ್ ವಾಲೆಂಟಿಯರ್ಸ್ ಟೀಂ (ಕೆಸಿವಿಟಿ) ದ.ಕ. ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

ಕೋವಿಡ್ ಲಸಿಕೆಯ ಕುರಿತಂತೆ ಎಷ್ಟೇ ತಾರ್ಕಿಕ ಚರ್ಚೆಗಳು ನಡೆಯುತ್ತಿದ್ದರೂ, ಕೊರೋನ ಸೋಂಕು ಹರಡದಂತೆ ತಡೆಯುವ ಸದ್ಯಕ್ಕಿರುವ ಏಕೈಕ ಉಪಾಯ ಲಭ್ಯವಿರುವ ಲಸಿಕೆಯನ್ನು ಹಾಕಿಸಿಕೊಳ್ಳುವುದೆಂಬುದು ಎಲ್ಲ ತಜ್ಞರ ಒಮ್ಮತದ ಸಲಹೆಯಾಗಿದೆ. ಆದ್ದರಿಂದಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳೂ ವ್ಯಾಕ್ಸಿನೇಶನ್ ಅಭಿಯಾನವನ್ನು ಸಮರೋಪಾದಿಯಲ್ಲಿ ನಡೆಸುತ್ತಿವೆ. ಎಲ್ಲ ದೇಶಗಳೂ ಉಚಿತ ವ್ಯಾಕ್ಸಿನೇಶನ್ ಮಾಡುತ್ತಿದ್ದು, ನಮ್ಮ ದೇಶದಲ್ಲೂ ಉಚಿತ ಲಸಿಕೆ ಎಲ್ಲರಿಗೂ ಸಿಗಬೇಕೆಂಬುದು ಜನರ ಒಕ್ಕೊರಳ ಬೇಡಿಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ 90 ಶೇಕಡಕ್ಕಿಂತಲೂ ಅಧಿಕ ಜನರಿಗೆ ಇನ್ನೂ ಕೋವಿಡ್ ಲಸಿಕೆ ನೀಡಲಾಗಿಲ್ಲ. ಜನರ ಜೀವ ಮತ್ತು ಜೀವನೋಪಾಯ ಎರಡೂ ಅಪಾಯದಲ್ಲಿದೆ. ಸರಕಾರಿ ಆಸ್ಪತ್ರೆಗಳಿಗೆ ಕಡಿಮೆ ಸಂಖ್ಯೆಯಲ್ಲಿ ಲಸಿಕೆ ಪೂರೈಕೆಯಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ಧಾರಾಳವಾಗಿ ಲಸಿಕೆ ಲಭ್ಯವಾಗುತ್ತಿದೆ. ವಿವಿಧ ಖಾಸಗಿ ಆಸ್ಪತ್ರೆಗಳ ಲಸಿಕಾ ದರಗಳಲ್ಲೂ ವ್ಯತ್ಯಾಸಗಳಿವೆ. ಜಿಲ್ಲೆಗೆ ಪೂರೈಕೆಯಾಗುತ್ತಿರುವ ಒಟ್ಟು ಲಸಿಕೆಗಳ ಲೆಕ್ಕಾಚಾರಗಳನ್ನು ಜಿಲ್ಲಾಡಳಿತ ಬಹಿರಂಗಪಡಿಸುತ್ತಿಲ್ಲ. ಕೆಲವು ಸರಕಾರಿ ಆಸ್ಪತ್ರೆಗಳ ಮುಂದೆ ಬೆಳಿಗ್ಗೆ 5 ಗಂಟೆಯಿಂದ ಹಿರಿಯ ನಾಗರಿಕರು ಸರದಿಯ ಸಾಲಲ್ಲಿ ನಿಂತರೂ ಲಸಿಕೆ ಸಿಗದೆ ಹಿಂತಿರುಗುತ್ತಿರುವುದು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಯುವಕರು ಲಸಿಕೆ ಹಾಕಿಸಿಕೊಳ್ಳುತ್ತಿರುವುದು ಆರ್ಥಿಕ ಸಂಕಷ್ಟದಲ್ಲಿರುವ ಜನರನ್ನು ಅಣಕಿಸುತ್ತಿದೆ. ಇವೆಲ್ಲವೂ ಸರಕಾರೀ ಲಸಿಕೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆಯೆಂಬ ಆರೋಪ, ಗೊಂದಲಗಳಿಗೂ ಕಾರಣ ವಾಗುತ್ತಿದೆ.

ಸರಕಾರದಿಂದ ಜಿಲ್ಲೆಯ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಸಿಗಲು ಸಾಧ್ಯವೇ ಇಲ್ಲ ಎಂದಾದರೆ, ಜಿಲ್ಲಾಡಳಿತ ಖರೀದಿಗೆ ಮುಂದಾಗಬಹುದು. ಕೇಂದ್ರ ಸರಕಾರದಿಂದ ನೇರವಾಗಿ ಲಸಿಕೆ ಖರೀದಿಸಿದರೆ ಪ್ರತಿ ಲಸಿಕೆಗೆ ರೂ.150 ರಂತೆ 10 ಲಕ್ಷ ಡೋಸ್‍ಗೆ ಬೇಕಾಗಿರುವುದು ರೂ.15 ಕೋಟಿ. ತಾವು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಜಿಲ್ಲೆಯ ಜನರಿಗೆ ಉಚಿತ ಲಸಿಕೆ ನೀಡುವ ಯೋಜನೆಯನ್ನು ರೂಪಿಸಿದಲ್ಲಿ ಜಿಲ್ಲೆಯ ಸಂಸದರು ಮತ್ತು ಶಾಸಕರ ಅನುದಾನವನ್ನು ನೀಡಬಹುದು ಹಾಗೂ ದೇಶ ವಿದೇಶಗಳಲ್ಲಿರುವ ಜಿಲ್ಲೆಯ ಉದ್ಯಮಿಗಳು ಮತ್ತು ಕೊರೊನ ಕಾಲದ ಸಿಪಾಯಿಗಳಾಗಿ ಕೆಲಸ ಮಾಡುತ್ತಿರುವ ಎನ್‍ಜಿಒಗಳು ತಮ್ಮೊಂದಿಗೆ ಖಂಡಿತ ಕೈಜೋಡಿಸಬಹುದು.

ಎಲ್ಲರಿಗೂ ಲಸಿಕೆ ನೀಡುವುದರ ಮೂಲಕ ಮಾತ್ರ ಕೊರೊನ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಆದುದರಿಂದ ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಯನ್ನು ನಿಲ್ಲಿಸಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಆದ್ಯತೆಯ ಮೇರೆಗೆ ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಸಿವಿಟಿ ದ.ಕ. ಜಿಲ್ಲಾ ಸಂಚಾಲಕ ಉಮರ್ ಯು.ಎಚ್. ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News