ಧರ್ಮಸ್ಥಳ ಸಂಸ್ಥೆಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಕಾನ್ಸಂಟ್ರೇಟರ್
ಉಡುಪಿ, ಜೂ.3: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್ಕೆಡಿಆರ್ಡಿಪಿ) ಉಡುಪಿ ಸಂಸ್ಥೆಯ ವತಿಯಿಂದ ಉಚಿತವಾಗಿ ನೀಡಲಾದ ಐದು ಆಮ್ಲಜನಕ ಕಾನ್ಸಂಟ್ರೇಟರ್ಗಳನ್ನು ಉಡುಪಿ ಜಿಲ್ಲಾಧಿಕಾರಿ ಗಳ ಮುಖಾಂತರ ಉಡುಪಿ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಸಂಸ್ಥೆಯ ಉಡುಪಿ ಜಲ್ಲಾ ನಿರ್ದೇಶಕ ಗಣೇಶ್ ಬಿ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್ ಅಮೀನ್ ಮುಂತಾದವರು ಉಪಸ್ಥಿತರಿದ್ದರು.
ಈಗಾಗಲೇ ಧರ್ಮಸ್ಥಳ ಎಸ್ಕೆಡಿಆರ್ಡಿಪಿ ಸಂಸ್ಥೆ ಕೋವಿಡ್ ಬಾಧಿತರ ಚಿಕಿತ್ಸೆಗಾಗಿ 5.5 ಟನ್ ಪ್ರಾಣವಾಯು ಆಕ್ಸಿಜನ್ನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಒದಗಿಸಿಕೊಟ್ಟಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಆದೇಶ ದಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಟ್ಟು 6 ಯೋಜನಾ ಕಛೇರಿಗಳ ಮುಖಾಂತರ 6 ವಾಹನಗಳನ್ನು ಪ್ರಸ್ತುತ ಕೋವಿಡ್ ಸನ್ನಿವೇಶದಲ್ಲಿ ಕೋವಿಡ್ ಶಂಕಿತ ರೋಗಿಗಳನ್ನು, ಸೋಂಕು ಧೃಡಪಟ್ಟ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹಾಗೂ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರಲು ಬಳಸಲಾಗಿದೆ. ಈವರೆಗೆ ಜಿಲ್ಲೆಯ ಒಟ್ಟು 134 ರೋಗಿಗಳ ಸಂಚಾರಕೆ ಇದನ್ನ್ಕು ಬಳಸಿಕೊಳ್ಳಲಾಗಿದೆ.
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕೆಲಸಗಳನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಶ್ಲಾಘಿಸಿದರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.