ಕಪ್ಪು ಶಿಲೀಂದ್ರ ಸೋಂಕಿಗೆ ಉಡುಪಿ ಜಿಲ್ಲೆಯಲ್ಲಿ ಎರಡನೇ ಬಲಿ
Update: 2021-06-04 21:22 IST
ಉಡುಪಿ, ಜೂ.4: ಕಳೆದ ಮೇ 30ರಂದು ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿದ್ದ ಉಡುಪಿ ಸಮೀಪದ ಕಡೆಕಾರಿನ 55 ವರ್ಷ ಪ್ರಾಯದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಕಪ್ಪು ಶಿಲೀಂದ್ರಕ್ಕೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ. ಈ ಮೊದಲು ಸಂತೆಕಟ್ಟೆಯ 76ರ ಹರೆಯ ಮಹಿಳೆಯೊಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದರು.
ಸದ್ಯ ಮಣಿಪಾಲದಲ್ಲಿ ಜಿಲ್ಲೆಯ ಇನ್ನೂ ಇಬ್ಬರು ಹಾಗೂ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಕುಂದಾಪುರ ನಾಗೂರಿನ 55 ವರ್ಷ ಪ್ರಾಯದ ಮಹಿಳೆ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಶಂಕಿತ ಕಪ್ಪು ಶೀಲೀಂದ್ರ ಸೋಂಕಿಗಾಗಿ ಕುಂದಾಪುರದ ವ್ಯಕ್ತಿಯೊಬ್ಬರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಅದಿನ್ನೂ ಖಚಿತಗೊಳ್ಳಬೇಕಿದೆ ಎಂದು ಜಿಲ್ಲಾಸ್ಪತ್ರೆ ಮೂಲಗಳು ತಿಳಿಸಿವೆ.