ಉಚ್ಚಿಲ: ಹೆದ್ದಾರಿ ಪಕ್ಕದಲ್ಲಿ ಕುಸಿತ
ಪಡುಬಿದ್ರಿ: ಸುರಿಯುತ್ತಿರುವ ಮಳೆಯಿಂದ ನೀರಿನ ಒರೆತ ಹೆಚ್ಚಾಗಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಬಸ್ಸು ತಂಗುದಾಣದ ಪಕ್ಕದಲ್ಲಿ ಕುಸಿತ ಕಂಡಿದೆ.
ಸುಮಾರು 5 ಅಡಿ ಸುತ್ತಳತೆ ಹಾಗೂ ಎರಡು ಮೂರು ಅಡಿಯಷ್ಟು ಕುಸಿದಿದ್ದು, ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಗಮನಿಸಿದ ಸ್ಥಳೀಯರು ರಸ್ತೆ ಕುಸಿದಿರುವುದನ್ನು ಕಂಡು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಮೊದಲು ಈ ಸ್ಥಳದಲ್ಲಿ ಮನೆ ಮತ್ತು ಸುಮಾರು ನೂರು ವರ್ಷಗಳ ಹಳೆಯದಾದ ಬಾವಿ ಇದ್ದ ಬಗ್ಗೆ ಸ್ಥಳೀಯ ನಿವಾಸಿ ವಾಮನ ನೆನಪಿಸುತ್ತಾರೆ. ಹೆದ್ದಾರಿ ಕಾಮಗಾರಿ ವೇಳೆ ಇಲಾಖೆ ಭೂ ಸ್ವಾಧೀನಗೊಳಿಸಿ ಬಾವಿಗೆ ಮಣ್ಣು ತುಂಬಲಾಗಿತ್ತು. ಸಮರ್ಪಕವಾಗಿ ಬಾವಿಗೆ ಮಣ್ಣು ತುಂಬದೆ ಇರುವುದೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಇದನ್ನು ಕೂಡಲೇ ದುರಸ್ತಿ ಪಡಿಸದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ಕುಶಾಲಿನಿ ಆಗಮಿಸಿ ಪರಿಶೀಲನೆ ನಡೆಸಿ ಹೆದ್ದಾರಿ ಗುತ್ತಿಗೆದಾರರಿಗೆ ಮಾಹಿತಿ ನೀಡಿದ್ದಾರೆ.