×
Ad

ಕೋವಿಡ್ ಸೋಂಕಿತರ ಆರೈಕೆಗೆ ಮಾದರಿಯಾದ ಮಿಯಾರು ಕೋವಿಡ್ ಕೇರ್ ಸೆಂಟರ್

Update: 2021-06-07 19:59 IST

ಉಡುಪಿ, ಜೂ.7: ಕೋವಿಡ್ ಸೋಂಕಿತರು ಬೇಗ ಗುಣಮುಖರಾಗಲು ಅವರ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸು ವುದು ಅತೀ ಮುಖ್ಯ ಅಂಶವಾಗಿದೆ. ಈ ನಿಟ್ಟಿನಲ್ಲಿ ಅವರು ಔಷಧಗಳ ಸೇವನೆ ಜೊತೆಗೆ ಪೋಷಕಾಂಶ ಭರಿತ ಹಾಗೂ ಸತ್ವ ಭರಿತ ಆಹಾರ ಸೇವನೆ ಮಾಡುವುದು ಅತೀ ಅಗತ್ಯ. ಸೋಂಕಿತರು ಹೋಂ ಐಸೋಲೇಶನಲ್ಲಿದ್ದರೆ ಕುಟುಂಬದವರು ಕಾಲಕಾಲಕ್ಕೆ ಅಂಥಾ ಆಹಾರವನ್ನು ನೀಡಬಹುದು. ಆದರೆ ಸೋಂಕಿತರು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾದರೆ ಇದೆಲ್ಲಾ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವಾಗಿ ಜಿಲ್ಲೆಯ ಕಾರ್ಕಳ ತಾಲೂಕು ಮಿಯಾರಿನ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾಡಳಿತ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಈ ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಖಲಾಗಿರುವ ಸೋಂಕಿತರಿಗೆ ಕಾಲ ಕಾಲಕ್ಕೆ ಸರಿಯಾಗಿ ಅತ್ಯಂತ ಶುದ್ದ ಹಾಗೂ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತಿದ್ದು, ಬೆಳಗಿನ ಉಪಹಾರಕ್ಕೆ ಇಡ್ಲಿ ಸಾಂಬಾರು, ಬಿಸಿಬೇಳೆ ಬಾತ್, ಪಲಾವ್ ಸಲಾಡ್, ಉಪ್ಪಿಟ್ಟು ಅವಲಕ್ಕಿ, ಚಿತ್ರಾನ್ನ/ಪುಳಿಯೊಗರೆ, ಸೆಟ್ ದೋಸೆ, ಸಾಗು ಮುಂತಾದ ವೈವಿಧ್ಯಮಯ ತಿಂಡಿಯ ಮೆನುವನ್ನು ಪ್ರತೀದಿನ ಸಿದ್ದಪಡಿಸಿ ಅದರಂತೆ ನೀಡಲಾಗುತ್ತಿದೆ. ಜೊತೆಯಲ್ಲಿ ಚಹಾ ಮತ್ತು ಕಷಾಯವನ್ನೂ ನೀಡಲಾಗುತ್ತಿದೆ.

ಅಪರಾಹ್ನದ ಊಟಕ್ಕೆ ಚಪಾತಿ, ಅನ್ನ, ಪಲ್ಯ, ಮೊಟ್ಟೆ, ಸಾಂಬಾರು, ಮೊಸರು, ಉಪ್ಪಿನಕಾಯಿ ನೀಡಲಾಗುತ್ತಿದ್ದು, ಮಧ್ಯಾಹ್ನ ಊಟಕ್ಕೆ ಕುಚ್ಚಿಗೆ ಅನ್ನ ಹಾಗೂ ರಾತ್ರಿ ಊಟಕ್ಕೆ ಬೆಳ್ತಿಗೆ ಅನ್ನ ನೀಡಲಾಗುತ್ತಿದೆ. ಅಲ್ಲದೆ ಪ್ರತೀದಿನ ಸಂಜೆ ಅವಲಕ್ಕಿ ಒಗ್ಗರಣೆ, ಶ್ಯಾವಿಗೆ, ರವೆ ಉಪ್ಪಿಟ್ಟು, ಮಾಲ್ಟ್, ಫ್ರುಟ್ ಸಲಾಡ್ ಸಹ ವಿತರಿಸುವ ಮೂಲಕ ಕೋವಿಡ್ ಸೋಂಕಿತರ ಆರೋಗ್ಯ ಶೀಘ್ರದಲ್ಲಿ ಸುಧಾರಣೆ ಯಾಗುವಂತೆ ಮಾಡಲಾಗುತ್ತಿದೆ.

ಪ್ರಸ್ತುತ ಈ ಆರೈಕೆ ಕೇಂದ್ರದಲ್ಲಿ 19 ಮಂದಿ ಸೋಂಕಿತರಿದ್ದು ಈ ಮೊದಲು ಗರಿಷ್ಠ 49 ಮಂದಿ ಇಲ್ಲಿದ್ದರು. ಪ್ರತೀದಿನ ಗುಣಮುಖ ರಾಗುವರು ಇಲ್ಲಿಂದ ತೆರಳಿದರೆ, ಹೊಸ ಸೋಂಕಿತರು ಇಲ್ಲಿ ಸೇರ್ಪಡೆಯಾಗುತಿದ್ದಾರೆ. ಅಡುಗೆ ಮಾಡಲು ಬಿಸಿಎಂ ಹಾಸ್ಟೆಲ್‌ನ 5 ಮಂದಿ ಅಡುಗೆ ಸಿಬ್ಬಂದಿ ಹಾಗೂ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನ 6 ಮಂದಿ ಸಿಬ್ಬಂದಿಗಳು 2 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದಾರೆ. ಇವರು ಸಮಯಕ್ಕೆ ಸರಿಯಾಗಿ ಊಟೋಪಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರನ್ನು ಹೋಂ ಐಸೋಲೇಶನ್‌ಗೆ ಒಳಪಡಿಸಲಾಗುತ್ತಿತ್ತು. ಆದರೆ ಬಹು ತೇಕ ಮನೆಗಳಲ್ಲಿ ಸೋಂಕಿತರಿಗೆ ಪ್ರತ್ಯೇಕ ಕೊಠಡಿ, ಶೌಚಾಲಯಗಳ ಸಮಸ್ಯೆ ಇರುವ ಕಾರಣ ಅಂತಹವರಿಗಾಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆದು, ಅಲ್ಲಿಯೇ ಅಗತ್ಯ ವೈದ್ಯಕೀಯ ಚಿಕಿತ್ಸೆ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.

‘ಮನೆಯಲ್ಲಿದ್ದಂತೆ ಆರೈಕೆ’

''ಈ ಕೇಂದ್ರದಲ್ಲಿ 6 ಮಂದಿ ಶುಶ್ರೂಷಕರು ಸರದಿ ಪಾಳಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದು, ಪ್ರತೀದಿನ ವೈದ್ಯರು ಅಗಮಿಸಿ ಎಲ್ಲರ ಆರೋಗ್ಯ ತಪಾಸಣೆ ನಡೆಸುತ್ತಿ  ದ್ದಾರೆ. ಜಿಲ್ಲಾಡಳಿತದ ಮೂಲಕ ದಿನಸಿ ಸಾಮಗ್ರಿಗಳು ಸರಬರಾಜಾಗುತ್ತಿದ್ದು, ಇಲ್ಲಿಯೇ ಆಹಾರವನ್ನು ಸಿದ್ದಪಡಿಸಿ ನೀಡಲಾಗುತ್ತಿದೆ. ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ ಆಹಾರ ತಯಾರಿಸಲಾಗುತ್ತಿದೆ. ಕೇಂದ್ರದ ಸೋಂಕಿತರಿಗೆ ಆರೈಕೆ ಕೇಂದ್ರದಲ್ಲಿ ತಯಾರಿಸಿದ ಆಹಾರ ಎನ್ನುವ ಭಾವನೆ ಬರದಂತೆ ತಮ್ಮ ಮನೆಯದೇ ಆಹಾರ ಎಂಬ ಭಾವನೆ ಮೂಡುವಂತೆ ಮಾಡಿದ್ದೇವೆ. ಎಲ್ಲರೂ ಇಲ್ಲಿನ ವ್ಯವಸ್ಥೆ ಬಗ್ಗೆ ಸಂತೃಷ್ಠರಾಗಿದ್ದಾರೆ''.

-ಲೋಕೇಶ್, ನೋಡೆಲ್‌ಅಧಿಕಾರಿ ಮಿಯಾರು ಕೋವಿಡ್ ಕೇರ್ ಸೆಂಟರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News