ಬೈಂದೂರು: ಪಿಕ್ಅಪ್ ಢಿಕ್ಕಿ; ಪಾದಾಚಾರಿ ಮೃತ್ಯು
Update: 2021-06-10 16:30 GMT
ಬೈಂದೂರು, ಜೂ.10: ಪಿಕ್ಅಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜೂ.10 ರಂದು ಬೆಳಗಿನ ಜಾವ 6ಗಂಟೆ ಸುಮಾರಿಗೆ ಉಪ್ಪುಂದ ವೀರ ಮಾರುತಿ ಭಜನಾ ಮಂದಿರ ಸಮೀಪ ನಡೆದಿದೆ.
ಮೃತರನ್ನು ಉದಯ ಖಾರ್ವಿ ಎಂದು ಗುರುತಿಸಲಾಗಿದೆ. ವೀರ ಮಾರುತಿ ಭಜನಾ ಮಂದಿರದ ಕಡೆಯಿಂದ ಹೊನ್ನುಮನೆ ಕಡೆಗೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಉದಯ ಖಾರ್ವಿಗೆ ಪಿಕಪ್ ವಾಹನದ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಉದಯ ಖಾರ್ವಿ ಬೈಂದೂರು ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.