ಬಿಜೆಪಿ ಕ್ಷೇಮ ನಿಧಿ ಯೋಜನೆ ರಾಷ್ಟ್ರದಲ್ಲೇ ಮೊದಲ ಬಾರಿ ಬಂಟ್ವಾಳದಲ್ಲಿ ಅನುಷ್ಠಾನಕ್ಕೆ: ನಳಿನ್ ಕುಮಾರ್ ಕಟೀಲು
ಬಂಟ್ವಾಳ, ಜೂ.12: ಇಬ್ಬರು ಪುಟ್ಟ ಹೆಣ್ಣು ಮಕ್ಕಳು. ಒಬ್ಬಳು 2 ವರ್ಷದ ಅಂಶಿಕ, ಇನ್ನೊಬ್ಬಳು 3 ತಿಂಗಳ ಪೂರ್ವಿಕ. ಈ ಮಕ್ಕಳಿಬ್ಬರ ತಾಯಿ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ತಾಯಿಯಿಲ್ಲದೆ ತಬ್ಬಲಿಯಾಗಿ ಸದ್ಯ ದೊಡ್ಡಮ್ಮನ ಮಡಿಲಲ್ಲಿ ಬೆಳೆಯುತ್ತಿರುವ ಈ ಪುಟ್ಟ ಕಂದಮ್ಮಗಳ ಮುಂದಿನ ಭವಿಷ್ಯಕ್ಕಾಗಿ ಈಗ ಆಸರೆಯಾಗಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಪರಿಕಲ್ಪನೆಯಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ಸ್ಥಾಪಿಸಲಾದ 'ಬಂಟ್ವಾಳ ಬಿಜೆಪಿ ಕ್ಷೇಮ ನಿಧಿ'.
ವೇಣೂರು ಸಮೀಪದ ಪೆರಿಂಜೆಯ ಅನುಸೂಯ ಅವರು ಪೂರ್ವಿಕಳಿಗೆ ಜನ್ಮ ನೀಡಿ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ತಾಯಿಯನ್ನು ಕಳಕೊಂಡ ಈ ಇಬ್ಬರು ಕಂದಮ್ಮರನ್ನು ಮೃತ ಅನುಸೂಯ ಅವರ ಅಕ್ಕ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನಡುಲಚ್ಚಿಲ್ ನಿವಾಸಿ ರೇವತಿಕೃಷ್ಣಪ್ಪ ಅವರು ತನ್ನ ಮೂವರು ಮಕ್ಕಳ ಜೊತೆಯಲ್ಲಿ ಸದ್ಯ ಆರೈಕೆ ಮಾಡುತ್ತಿದ್ದಾರೆ.
ರೇವತಿ ಕೃಷ್ಣಪ್ಪ ಅವರ ಕುಟುಂಬ ಬಡತನದ ನಡುವೆಯು ತನ್ನ ಮೃತ ಸಹೋದರಿಯ ಪುಟ್ಟ ಮಕ್ಕಳನ್ನು ಸಲಹುವ ಹೊಣೆಗಾರಿಕೆಯನ್ನು ಹೊತ್ತು ಮಾನವೀಯತೆ ಮೆರೆದಿದ್ದಾರೆ. ಇವರ ಈ ಮಾನವೀಯ ಕಾರ್ಯಕ್ಕೆ ಬಂಟ್ವಾಳ ಬಿಜೆಪಿ ಕ್ಷೇಮ ನಿಧಿಯ ಮೂಲಕ ನೆರವು ನೀಡಿದ್ದು ಈ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಜವಾಬ್ದಾರಿಯನ್ನು ಬಂಟ್ವಾಳ ಬಿಜೆಪಿ ಹೊತ್ತಿದೆ.
ಮಕ್ಕಳ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ತಲಾ ಎರಡು ಸಾವಿರ ರೂ.ಗಳಂತೆ ನೀಡುವುದರ ಜತೆಗೆ ಇಬ್ಬರು ಮಕ್ಕಳ ಹೆಸರಿನಲ್ಲಿ ತಲಾ 25 ಸಾವಿರ ರೂ.ವಿನಂತೆ ಮಣಿನಾಲ್ಕೂರು ವ್ಯ.ಸೇ.ಸ.ಬ್ಯಾಂಕ್ ನಲ್ಲಿ ಶನಿವಾರವೇ ಠೇವಣಿ ಇರಿಸಲಾಯಿತು. ಈ ಹಣ ಮಕ್ಕಳಿಗೆ 16 ವರ್ಷ ತುಂಬುವ ವೇಳೆ ಒಂದು ಲಕ್ಷ ರೂ.ದೊರೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಏಳನೇ ವರ್ಷದ ಆಡಳಿತದ ಸಂಭ್ರಮ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಜನಸೇವಾ ಕಾರ್ಯದ ಮೂಲಕ ಆಚರಿಸಿರುವ ಬಿಜೆಪಿ 'ಬಂಟ್ವಾಳ ಬಿಜೆಪಿ ಕ್ಷೇಮ ನಿಧಿ' ಯೋಜನೆಗೆ ಮೊದಲ ಆರ್ಹ ಫಲಾನುಭವಿಗೆ ಮಣಿನಾಲ್ಕೂರು ಗ್ರಾಮದ ನಡುಲಚ್ಚಿಲ್ ನ ಮನೆಯಲ್ಲಿಯೇ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಅಂಶಿಕಾ ಮತ್ತು ಪೂರ್ವಿಕ ಹೆಸರಿನಲ್ಲಿ ತಲಾ 25 ಸಾವಿರ ರೂ.ನಂತೆ 50 ಸಾವಿರ ರೂ.ನ್ನು ಬ್ಯಾಂಕ್ ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸುಧಾಕರ ಶೆಟ್ಟಿ ಅವರಿಗೆ ಹಸ್ತಾಂತರಿಸಿ ಅಧಿಕೃತ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಿಜೆಪಿ ಕ್ಷೇಮ ನಿಧಿ ಯೋಜನೆ ರಾಷ್ಟ್ರದಲ್ಲೇ ಮೊದಲ ಬಾರಿ ಬಂಟ್ವಾಳ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ಬಂದಿರುವುದು ಹೆಮ್ಮೆಯ ವಿಚಾರ ಎಂದರು.
ಶಾಸಕ ರಾಜೇಶ್ ನಾಯ್ಕ್ ಅವರ ಕಲ್ಪನೆಯ ಈ ಕ್ಷೇಮ ನಿಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಷ್ಟ್ರ ವ್ಯಾಪಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಹೆತ್ತವರನ್ನು ಕಳೆದುಕೊಂಡ ಅಥವಾ ತೀರಾ ಆರ್ಥಿಕ ಸಂಕಷ್ಟದ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕು ಎಂಬುದು ಬಿಜೆಪಿ ಪಕ್ಷದ ಯೋಚನೆಯಾಗಿದ್ದು ದೀನದಯಾಳ್ ಉಪಾಧ್ಯಾಯರ ಅಂತ್ಯೋದಯದ ಪರಿಕಲ್ಪನೆಯನ್ನು ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಕಾರ್ಯರೂಪಕ್ಕೆ ತರಲಾಗಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಿಕಲ್ಪನೆ ಭಾಗ್ಯಲಕ್ಷೀ ಯೋಜನೆ ಪ್ರೇರಣೆಯಾಗಿ ವೈಯಕ್ತಿಕವಾಗಿ ಪಕ್ಷ ಹಾಗೂ ಶಾಸಕರು ಇಂತಹ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ ಎಂದು ನಳಿನ್ ಕುಮಾರ್ ಅಭಿನಂದನೆ ಸಲ್ಲಿಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಇತ್ತೀಚೆಗಷ್ಠೆ ಅನುಷ್ಠಾನಕ್ಕೆ ಬಂದಿರುವ ಬಿಜೆಪಿ ಕ್ಷೇಮ ನಿಧಿಯ ಪ್ರಯೋಜನ ನೈಜ ಮತ್ತು ಅರ್ಹ ಫಲಾನುಭವಿಗೆ ತಲುಪಿರುವುದು ಸಂತೃಪ್ತಿ ತಂದಿದೆ. ರೇವತಿ ಅವರು ತನ್ನ ಮೂವರ ಮಕ್ಕಳ ಜೊತೆಯಲ್ಲಿ ತಾಯಿಯನ್ನು ಕಳಕೊಂಡ ಇಬ್ಬರ ಮಕ್ಕಳ ಭವಿಷ್ಯದ ಹೊಣೆ ಹೊತ್ತಿರುವುದು ಅವರ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದ ಶಾಸಕರು ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳಿಗಾಗಿ ಸ್ಥಾಪಿಸಲಾದ ಈ ಯೋಜನೆಯನ್ನು ಸಂಕಷ್ಟದ ಸ್ಥಿತಿಯಲ್ಲಿರುವ ಎಲ್ಲಾ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ವಿಸ್ತರಿಸಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ, ಮಣಿನಾಲ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ, ಸದಸ್ಯರಾದ ಪುರುಷೋತ್ತಮ ಮಜಲು, ಧನಂಜಯ ಶೆಟ್ಟಿ ಸರಪಾಡಿ, ಸಾಂತಪ್ಪ ಪೂಜಾರಿ, ಶಶಿಕಾಂತ್ ಶೆಟ್ಟಿ, ಪಕ್ಷದ ಪ್ರಮುಖರಾದ ಮಾಧವ ಮಾವೆ ಪುರುಷೋತ್ತಮ ಶೆಟ್ಟಿ, ಸುದರ್ಶನ್ ಬಜ ಚಿದಾನಂದ ರೈ, ಪೂವಪ್ಪ ಪೂಜಾರಿ, ಉಮೇಶ್ ಅರಳ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕ ಸರಪಾಡಿ ಆಶೋಕ್ ಶೆಟ್ಟಿ ವಂದಿಸಿದರು.