ಕಾರ್ಕಳ : ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ವತಿಯಿಂದ ಪತ್ರಕರ್ತರಿಗೆ ಕೋವಿಡ್ ಕಿಟ್
ಕಾರ್ಕಳ : "ಕೋವಿಡ್ ಸಂಕೀರ್ಣ ಕಾಲದಲ್ಲಿ ದೇಶದ ಜನರಿಗೆ ಕಾಲಕಾಲಕ್ಕೆ ಮಾಹಿತಿಗಳನ್ನು ನೀಡುತ್ತಿರುವ ಪತ್ರಕರ್ತರು ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿದ್ದು, ಮಾಧ್ಯಮದ ಮಂದಿಯೂ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಅವರಿಗೂ ಸೂಕ್ತ ಸೌಲಭ್ಯ, ಸಹಕಾರ ಕಲ್ಪಿಸುವುದು ಅನಿವಾರ್ಯವಾಗಿದೆ" ಎಂದು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ರವಿವಾರ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಅವರು ಎಸ್ ಸಿ ಡಿ ಸಿ ಸಿ ಬ್ಯಾಂಕ್ ವತಿಯಿಂದ ಕೋವಿಡ್ ಪ್ರಯುಕ್ತ ಆಹಾರ ಕಿಟ್ ಗಳನ್ನು ನೀಡಿ ಮಾತನಾಡಿದರು.
"ಕಳೆದ ಲಾಕ್ ಡೌನ್ ಅವಧಿಯಲ್ಲಿ ನಮ್ಮ ಬ್ಯಾಂಕ್ ಹಾಗೂ ಸಹ ಸಂಸ್ಥೆಗಳಿಂದ ಮಾಸ್ಕ್, ಆಹಾರ ಧಾನ್ಯಗಳನ್ನು ವಿತರಿಸಲಾಗಿತ್ತು. ಈ ಬಾರಿಯೂ ನೀಡಲಾಗಿದ್ದು, ಸಮಾಜ ಸಂಕಷ್ಟದಲ್ಲಿರುವಾಗ ಪೂರಕವಾಗಿ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ" ಎಂದರು.
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಿಟ್ ಗಳನ್ನು ವಿತರಿಸಿದರು. ತಹಶೀಲ್ದಾರ್ ಪುರಂದರ ಹೆಗ್ಡೆ, ನವೋದಯ ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿ ಸುನಿಲ್ ಕುಮಾರ್ ಬಜಗೋಳಿ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಮುಹಮ್ಮದ್ ಶರೀಫ್ ಕಾರ್ಯಕ್ರಮ ನಿರ್ವಹಿಸಿದರು. ಆರ್. ಬಿ. ಜಗದೀಶ್ ವಂದಿಸಿದರು.