ಉಡುಪಿ: ಗ್ಯಾರೇಜ್ ಕಾರ್ಮಿಕರಿಗೆ ಲಸಿಕೆಗಾಗಿ ಅಪರ ಜಿಲ್ಲಾಧಿಕಾರಿಗೆ ಮನವಿ

Update: 2021-06-16 13:48 GMT

ಉಡುಪಿ, ಜೂ.16: ಆಟೋಮೊಬೈಲ್ ಕ್ಷೇತ್ರದಲ್ಲಿ ದುಡಿಯುತ್ತಿರುವ ಜಿಲ್ಲೆಯ ಸುಮಾರು ಮೂರು ಸಾವಿರ ಗ್ಯಾರೇಜ್ ಮಾಲಕರು ಮತ್ತು ಕಾರ್ಮಿಕ ವರ್ಗಕ್ಕೆ ಲಸಿಕೆ ನೀಡಲು ಶಿಬಿರಗಳನ್ನು ಆಯೋಜಿಸುವಂತೆ ಅಪರ ಜಿಲ್ಲಾಧಿಕಾರಿ ಬಿ ಸದಾಶಿವ ಪ್ರಭು ಅವರಿಗೆ ಗ್ಯಾರೇಜ್ ಮಾಲಕರ ಸಂಘ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಸೋಮವಾರದಿಂದ ರಾಜ್ಯದೆಲ್ಲೆಡೆ ಕೋವಿಡ್ ಪಾಸಿಟಿವಿಟಿ ಪ್ರಮಾಣ ಕಡಿಮೆಯಾದ ಉಡುಪಿ ಜಿಲ್ಲೆಯನ್ನು ಸೇರಿಸಿ ಲಾಕ್‌ಡೌನ್ ನಿಯಮಗಳನ್ನು ಸಡಿಲುಗೊಳಿಸಲಾಗಿದೆ. ಆದರೆ ಅಟೋಮೊಬೈಲ್ ಕ್ಷೇತ್ರಕ್ಕೆ ಸರಕಾರದ ಲಾಕ್ ಡೌನ್ ನಿಯಮಗಳಲ್ಲಿ ವ್ಯವಹಾರ ಮಾಡಲು ಇನ್ನೂ ನಿರ್ಬಂಧವಿದೆ. ಈಗಾಗಲೇ ಒಂದೂವರೆ ವರ್ಷದಿಂದ ಕೊರೋನ ಅಲೆಯಿಂದ ಇವರೆಲ್ಲರ ಬದುಕು ದೇಶದ ಆರ್ಥಿಕ ಪರಿಸ್ಥಿತಿಯಿಂದ ಅತಂತ್ರ ಸ್ಥಿತಿಯಲ್ಲಿದೆ ಎಂದು ಮನವಿ ಯಲ್ಲಿ ತಿಳಿಸಲಾಗಿದೆ.

ಸರಕಾರ ನೀಡಿದ ಕೋವಿಡ್ ಪರಿಹಾರ ನಿಧಿ ಕೇವಲ 5 ಪ್ರತಿಶತ ಜನರಿಗೆ ಮಾತ್ರ ತಲುಪುತ್ತಿದೆ. ಅಲ್ಲದೇ ಗ್ಯಾರೇಜ್ ವ್ಯವಹಾರದ ವಾತಾವರಣದಲ್ಲಿ ಕೊರೋನ ಹರಡುವ ಯಾವ ಸಂಭವನೀಯತೆಯೂ ಇಲ್ಲ. ಹೆಚ್ಚಿನ ಗ್ಯಾರೇಜುಗಳಲ್ಲಿ ಮೂರು ಅಥವಾ ನಾಲ್ವರು ಕಾರ್ಮಿಕರು ಮಾತ್ರ ದುಡಿಯುತ್ತಿದ್ದು ಇಲ್ಲಿ ಸುರಕ್ಷತಾ ಅಂತರವನ್ನು ಪ್ರತೀ ಕ್ಷಣವೂ ಅನುಸರಿಸಲಾಗುತ್ತದೆ. ಆದುದರಿಂದ ಲಾಕ್‌ಡೌನ್ ಸಡಿಲಿಕೆ ನಿಯಮಗಳನ್ನು ಗ್ಯಾರೇಜ್, ಬಿಡಿಭಾಗಗಳ ಅಂಗಡಿಗಳು ಸೇರಿದಂತೆ ಜಿಲ್ಲೆಯಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ದುಡಿಯುವ ಎಲ್ಲ ಕಾರ್ಮಿಕರಿಗೂ ಅನ್ವುಸುವಂತೆ ಮನವಿ ಒತ್ತಾಯಿಸಲಾಗಿದೆ.

ಈ ವೇಳೆ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಕೋಶಾಧಿಕಾರಿ ಸಂತೋಷ್, ಮಂಗಳೂರು ಗ್ಯಾರೇಜ್ ಮಾಲಕರ ಸಂಘದ ಮಾಜಿ ಉಪಾಧ್ಯಕ್ಷ ಉದಯಕಿರಣ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News